ಮಹಾರಾಷ್ಟ್ರ ಸಿಎಂ ಸಹಿ ಮಾಡಿದ ಕಡತವನ್ನೇ ತಿರುಚಿದ ಅಧಿಕಾರಿಗಳು!
ಮುಂಬೈ, ಜ.24: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಸಹಿ ಮಾಡಿದ ಕಡತವನ್ನೇ ಸಚಿವಾಲಯದ ಉನ್ನತ ಅಧಿಕಾರಿಗಳು ತಿರುಚಿದ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ವಂಚನೆ ಮತ್ತು ಫೋರ್ಜರಿ ಪ್ರಕರಣವನ್ನು ಮೆರೈನ್ ಡ್ರೈವ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಒಬ್ಬರ ವಿರುದ್ಧ ಇಲಾಖಾ ತನಿಖೆ ನಡೆಸುವುದನ್ನು ದೃಢೀಕರಿಸುವ ಕಡತವೊಂದಕ್ಕೆ ಸಿಎಂ ಸಹಿ ಮಾಡಿದ್ದರು. ಆದರೆ ಆ ಬಳಿಕ ಕೆಂಪು ಶಾಯಿಯಲ್ಲಿ ಅವರ ಸಹಿಯ ಮೇಲ್ಭಾಗದಲ್ಲಿ ತನಿಖೆಯನ್ನು ಸ್ಥಗಿತಗೊಳಿಸುವಂತೆ ಷರಾ ಬರೆಯಲಾಗಿದೆ.
"ಅನಾಮಧೇಯರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ" ಎಂದು ಡಿಸಿಪಿ ಶಶಿಕುಮಾರ್ ಮೀನಾ ಹೇಳಿದ್ದಾರೆ.
ಈ ಅಪರೂಪದ ಪ್ರಕರಣ ಸಚಿವಾಲಯ ಮಟ್ಟದಲ್ಲಿ ಅಲ್ಲೋಲಕಲ್ಲೋಲ ಎಬ್ಬಿಸಿದೆ. "ಮುಖ್ಯಮಂತ್ರಿಗಳ ಸಹಿಗೆ ಅತ್ಯಂತ ಮಹತ್ವ ಇದೆ. ಹಿರಿಯ ಅಧಿಕಾರಿಗಳು ಮತ್ತು ಇಲಾಖಾ ಸಚಿವರು ಮೇಲ್ತನಿಖೆ ನಡೆಸಿ ಕೈಗೊಂಡ ನಿರ್ಧಾರಗಳಿಗೆ ಅಂತಿಮ ಒಪ್ಪಿಗೆಯನ್ನು ಸಿಎಂ ನೀಡುತ್ತಾರೆ" ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸಿಎಂ ಸಹಿ ಮಡಿದ ಬಳಿಕವೇ ಕೋಟ್ಯಂತರ ರೂಪಾಯಿ ಅನುದಾನ ಕೂಡಾ ಬಿಡುಗಡೆಯಾಗುತ್ತದೆ. ಸಿಎಂ ಸಹಿ ಮಾಡಿದ ಕಡತವನ್ನು ತಿರುಚಿರುವುದರ ಪರಿಣಾಮ ಅಗಾಧ" ಎಂದು ಅವರು ವಿವರಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ಜೆಜೆ ಸ್ಕೂಲ್ ಆಫ್ ಆರ್ಟ್ ಕಟ್ಟಡ ನಿರ್ಮಾಣದ ವೇಳೆ ನಡೆಸಿದ ಹಣಕಾಸು ಅವ್ಯವಹಾರ ಆರೋಪದಲ್ಲಿ ಹಲವು ಮಂದಿ ಲೋಕೋಪಯೋಗಿ ಇಲಾಖೆ ಎಂಜಿನಿಯರ್ಗಳ ವಿರುದ್ಧ ಇಲಾಖಾ ವಿಚಾರಣೆಗೆ ಹಿಂದಿನ ಬಿಜೆಪಿ ನೇತೃತ್ವದ ಸರಕಾರ ಶಿಫಾರಸು ಮಾಡಿತ್ತು. ಈಗ ಅಧೀಕ್ಷಕ ಎಂಜಿನಿಯರ್ ಆಗಿರುವ ನಾನಾ ಪವಾರ್ ಕೂಡಾ ತನಿಖೆಗೆ ಒಳಗಾಗಬೇಕಾದ ಅಧಿಕಾರಿಗಳ ಪಟ್ಟಿಯಲ್ಲಿ ಸೇರಿದ್ದರು.
ಎಂವಿಎ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಲೋಕೋಪಯೋಗಿ ಸಚಿವ ಅಶೋಕ್ ಚವಾಣ್ ತನಿಖೆಗೆ ಒಪ್ಪಿಗೆ ನೀಡಿದ್ದರು ಹಾಗೂ ತಮ್ಮ ಒಪ್ಪಿಗೆಯೊಂದಿಗೆ ಕಡತವನ್ನು ಸಿಎಂ ಕಚೇರಿಗೆ ಕಳುಹಿಸಿದ್ದರು. ಅದು ಮತ್ತೆ ಇಲಾಖೆಗೆ ಬಂದಾಗ, ತಮ್ಮ ಶಿಫಾರಸನ್ನು ಸಿಎಂ ಮಾರ್ಪಡಿಸಿರುವುದು ಸಚಿವರಿಗೆ ಅಚ್ಚರಿ ತಂದಿತ್ತು. ಇತರ ಅಧಿಕಾರಿಗಳ ವಿರುದ್ಧದ ವಿಚಾರಣೆ ಮುಂದುವರಿದರೆ, ಪವಾರ್ ವಿರುದ್ಧದ ತನಿಖೆ ಮಾತ್ರ ಕೈಬಿಡಲಾಗಿತ್ತು.