ನಿವೃತ್ತ ಉಪ ತಹಶೀಲ್ದಾರ್ ಯು.ಎನ್.ಅಹ್ಮದ್ ನಿಧನ
ಮಂಗಳೂರು, ಜ.25: ನಿವೃತ್ತ ಉಪ ತಹಶೀಲ್ದಾರ್, ಉಳ್ಳಾಲ ಮಾಸ್ತಿಕಟ್ಟೆಯ ನಿವಾಸಿ ಯು.ಎನ್.ಅಹ್ಮದ್ (89) ಸೋಮವಾರ ಮುಂಜಾವ 2:45ಕ್ಕೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ ಮತ್ತು ಮೂವರು ಪುತ್ರರು ಮತ್ತು ಒಬ್ಬ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಅವರ ಮಾವ (ಪತ್ನಿಯ ತಂದೆ)ರಾಗಿದ್ದ ಯು.ಎನ್.ಅಹ್ಮದ್ ಜಿಲ್ಲೆಯ ಹಲವು ಕಡೆ ಮಣೆಗಾರರಾಗಿದ್ದರು. ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ವ್ಯವಸ್ಥಾಪಕರೂ ಆಗಿದ್ದ ಅವರು ಭ್ರಷ್ಟಾಚಾರ ವಿರೋಧಿಯಾಗಿದ್ದರು. ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರರಹಿತ ಅಧಿಕಾರಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು. 1989ರಲ್ಲಿ ಸ್ವಯಂ ನಿವೃತ್ತಿ ಪಡೆದ ಬಳಿಕ ಅವರು ನ್ಯಾಯವಾದಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದರು.
ಉಳ್ಳಾಲದ ಮಾಸ್ತಿಕಟ್ಟೆಯ ಭಾರತ್ ಪಿ.ಯು. ಕಾಲೇಜ್ ಬಳಿಯ ಮುಖ್ಯ ರಸ್ತೆ ಯಲ್ಲಿರುವ ಸ್ವಗೃಹದಲ್ಲಿ ಮೃತದೇಹದ ಅಂತಿಮ ದರ್ಶನಕ್ಕಿಡಲಾಗಿದೆ. ಸೋಮವಾರ ಮಧ್ಯಾಹ್ನ ಉಳ್ಳಾಲದ ಹೊಸಪಳ್ಳಿ ಮಸೀದಿಯ ವಠಾರದ ದಫನಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.