ರೈತರೊಂದಿಗಿನ ಘರ್ಷಣೆ: 80ಕ್ಕೂ ಅಧಿಕ ದಿಲ್ಲಿ ಪೊಲೀಸ್ ಸಿಬ್ಬಂದಿಗೆ ಗಾಯ
ಹೊಸದಿಲ್ಲಿ: ಕೇಂದ್ರ ಸರಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಗಣರಾಜ್ಯೋತ್ಸವದಂದು ನಗರದಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸಲು ಉದ್ದೇಶಿಸಿದ್ದ ರೈತರ ಗುಂಪೊಂದು ಪೊಲೀಸ್ ಬ್ಯಾರಿಕೇಡ್ ಗಳನ್ನು ಕೆಡವಿ ಹಾಕಿ ಬಳಿಕ ಉಂಟಾಗಿರುವ ಹಿಂಸಾಚಾರದಲ್ಲಿ ದಿಲ್ಲಿಯ 80ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಹಲವರಿಗೆ ಗಂಭೀರ ಗಾಯವಾಗಿದೆ ಎಂದು ndtv.com ವರದಿ ಮಾಡಿದೆ.
ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿಯನ್ನು ದಿಲ್ಲಿ ಉತ್ತರ ಜಿಲ್ಲೆಯ ಸಿವಿಲ್ ಲೈನ್ ಹಾಸ್ಪಿಟಲ್ ಹಾಗೂ ಸೆಂಟ್ರಲ್ ದಿಲ್ಲಿಯ ಲೋಕನಾಯಕ ಹಾಸ್ಪಿಟಲ್ ಸೇರಿದಂತೆ ಹಲವು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಎಲ್ ಎನ್ ಜೆಪಿ ಆಸ್ಪತ್ರೆಯಲ್ಲಿ 38 ಪೊಲೀಸ್ ಸಿಬ್ಬಂದಿ, ಸಿವಿಲ್ ಲೈನ್ ಆಸ್ಪತ್ರೆಯಲ್ಲಿ 11, ಅರುಣಾ ಆಸಿಫ್ ಅಲಿ ಆಸ್ಪತ್ರೆಯಲ್ಲಿ 8 ಹಾಗೂ ಲೇಡಿ ಹಾರ್ಡಿಂಜ್ ಹಾಗೂ ತಿರತ್ ರಾಮ್ ಶಾ ಆಸ್ಪತ್ರೆಯಲ್ಲಿ ತಲಾ 4 ಪೊಲೀಸ್ ಸಿಬ್ಬಂದಿಯನ್ನು ದಾಖಲಿಸಲಾಗಿದೆ. ಮಹಾರಾಜ ಅಗರ್ ಸೇನ್, ತಾರಕ್ ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ಬಾಲಾಜಿ ಆಸ್ಪತ್ರೆಯಲ್ಲೂ ಗಾಯಗೊಂಡಿರುವ ಪೊಲೀಸರನ್ನು ದಾಖಲಿಸಲಾಗಿದೆ.
ಹಿಂಸಾಚಾರದಲ್ಲಿ ಒಟ್ಟು ದಿಲ್ಲಿಯ 83 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ದಿಲ್ಲಿ-ನೊಯ್ಡಾ ಬಾರ್ಡರ್ ನ ಚಿಲ್ಲಾದಲ್ಲಿ ಟ್ರ್ಯಾಕ್ಟರ್ ಉರುಳಿಬಿದ್ದು, ಕನಿಷ್ಠ ಇಬ್ಬರು ರೈತರು ಗಾಯಗೊಂಡಿದ್ದಾರೆ.
ಪ್ರತಿಭಟನಕಾರರು ಹಾಗೂ ಪೊಲೀಸರ ನಡುವೆ ಐಟಿಒ ಜಂಕ್ಷನ್ (ದಿಲ್ಲಿ ಪೊಲೀಸ್ ಮುಖ್ಯ ಕಚೇರಿ ಇರುವ ಪ್ರದೇಶ)ಹಾಗೂ ರೆಡ್ ಫೋರ್ಟ್ ಪ್ರದೇಶದ ಒಳಗೆ ಸಂಘರ್ಷ ಉಂಟಾಗಿತ್ತು.