ಹೆಣ್ಣು ಮಕ್ಕಳ ಶಿಕ್ಷಣ ಆರೋಗ್ಯ ಸುಧಾರಣೆ ನಮ್ಮ ಹೊಣೆಗಾರಿಕೆ- ಪವಿತ್ರಾದಾಸ್
ಮುಡಿಪು, ಜ. 27: ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಆರೋಗ್ಯ ಮತ್ತು ಜೀವನ ಶೈಲಿಯ ಸುಧಾರಣೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಬಾಲ ವಿಕಾಸ ಸಮಿತಿ ಅಧ್ಯಕ್ಷರಾದ ಪವಿತ್ರಾದಾಸ್ ಅಭಿಪ್ರಾಯ ಪಟ್ಟರು.
ಇವರು ಬಾಳೆಪುಣಿ ಗ್ರಾಮ ಪಂಚಾಯತು,ಮಹಿಳಾ ಮತ್ತು ಮಕ್ಜಳ ಅಭಿವೃದ್ದಿ ಇಲಾಖೆ ಬಂಟ್ವಾಳ,ಜನ ಶಿಕ್ಷಣ ಟ್ರಸ್ಟ್ ಮಂಗಳೂರು,ಹಾಗೂ ಬಾಲ ವಿಕಾಸ ಸಮಿತಿ ಅಂಗನವಾಡಿ ಕೇಂದ್ರ ಅನಂಗ ಇದರ ಆಶ್ರಯದಲ್ಲಿ ಜರುಗಿದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಜನ ಶಿಕ್ಷಣ ಟ್ರಸ್ಟ್ ಇದರ ನಿರ್ದೇಶಕರೂ ಮಾಜಿ ಓಂಬುಡ್ಸ್ಮನ್ ಆದ ಶ್ರೀ ಶೀನ ಶೆಟ್ಟಿ ಹೆಣ್ಣು ಮಕ್ಕಳ ರಕ್ಷಣೆ,ಸಮಾನತೆ,ಶಿಕ್ಷಣದ ಮಹತ್ವ,ಹಾಗೂ ಸ್ವಚ್ಛತೆಯ ಕುರಿತು ಮಾಹಿತಿ ನೀಡಿದರು.ಹೆಣ್ಣು ಭ್ರೂಣ ಹತ್ಯೆ,ಆರೋಗ್ಯ,ಶಿಕ್ಷಣ,ಪೌಷ್ಟಿಕಾಂಶ ಸೇರಿದಂತೆ ಆರೋಗ್ಯ ಇಲಾಖೆಯಿಂದ ನೀಡುವ ವಿವಿಧ ಯೋಜನೆಗಳ ಕುರಿತು ಆಶಾಕಾರ್ಯಕರ್ತೆ ಶೈಲಜಾ ಮಾಹಿತಿ ನೀಡಿದರು.
ಮಂಗಳೂರಿನ ರಥಬೀದಿಯ ಪಿ ದಯಾನಂದ ಪೈ ಹಾಗೂ ಪಿ ಸತೀಶ್ ಪೈ ಪ್ರಥಮ ದರ್ಜೆ ಕಾಲೇಜು ಇಲ್ಲಿನ ವಿದ್ಯಾರ್ಥಿಗಳು ಸ್ವಚ್ಛತಾ ಗೀತೆ ಹಾಗೂ ನಾಟಕ ವನ್ನು ಪ್ರಸ್ತುತ ಪಡಿಸಿದರು.ಮತದಾರರ ಜಾಗೃತಿ ಕುರಿತಂತೆ ಸಂವಾದ, ವಿಚಾರ ವಿನಿಮಯ ಜರುಗಿತು.
ಸಮಾರಂಭದಲ್ಲಿ ಗ್ರಾಮ ಪಂಚಾಯತು ಸದಸ್ಯರಾದ ಜನಾರ್ಧನ ಕುಲಾಲ್,ಕಿಶೋರಿಯರ ಸಂಘದ ಅಧ್ಯಕ್ಷರಾದ ಕಮಾರಿ ಸುಶ್ಮಿತಾ,ಸಮಿತಿ ಸದಸ್ಯರಾದ ಕಲೀಲ್ ಕಾಯೇರ್, ಜನ ಶಿಕ್ಷಣ ಟ್ರಸ್ಟ್ ನ ನಿರ್ದೇಶಕರಾದ ಕೃಷ್ಣ ಮೂಲ್ಯ ಅಂಗನವಾಡಿ ಕಾರ್ಯ ಕರ್ತೆ ಪೂರ್ಣಿಮಾ, ಸಹಾಯಕಿ ಅಮಿತಾ ಉಪಸ್ಥಿತರಿದ್ದರು. ಸಮಿತಿ ಸದಸ್ಯರು,ತಾಯಂದಿರು,ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಗ್ರಾಮ ಪಂಚಾಯತ್ ಸಿಬ್ಬಂದಿ ಸದಾನಂದ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.