ಕರ್ನಾಟಕದ ಮರಾಠಿ ಭಾಷಿಕ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶಗಳೆಂದು ಘೋಷಿಸಿ: ಉದ್ಧವ್ ಠಾಕ್ರೆ ಆಗ್ರಹ
ಮುಂಬೈ, ಜ.27: ಮಹಾರಾಷ್ಟ್ರ- ಕರ್ನಾಟಕ ಗಡಿ ವಿವಾದದ ಬಗ್ಗೆ ಸುಪ್ರೀಂಕೋರ್ಟ್ ಅಂತಿಮ ತೀರ್ಪು ನೀಡುವವರೆಗೆ ಕರ್ನಾಟಕದಲ್ಲಿ ಮರಾಠಿ ಭಾಷಿಕರು ಹೆಚ್ಚಿರುವ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆಗ್ರಹಿಸಿದ್ದಾರೆ.
ಎರಡು ರಾಜ್ಯಗಳ ನಡುವಿನ ಗಡಿ ವಿವಾದದ ಕುರಿತ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಮರಾಠಿ ಭಾಷಿಕರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಈ ಪ್ರದೇಶಗಳನ್ನು ಮಹಾರಾಷ್ಟ್ರದಲ್ಲಿ ಸೇರಿಸಲು ಹೋರಾಟದ ಅಗತ್ಯವಿದೆ ಎಂದರು. ಬೆಳಗಾವಿ, ಕಾರವಾರ, ನಿಪ್ಪಾಣಿ ಸಹಿತ ಮರಾಠಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಕರ್ನಾಟಕದ ಕೆಲವು ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬುದು ಮಹಾರಾಷ್ಟ್ರದ ವಾದವಾಗಿದೆ.
ಸುಪ್ರೀಂಕೋರ್ಟ್ನಲ್ಲಿ ಗಡಿ ವಿವಾದ ಇತ್ಯರ್ಥಕ್ಕೆ ಬಾಕಿ ಇರುವಂತೆಯೇ ಕರ್ನಾಟಕವು ಬೆಳಗಾಂವ್ನ ಹೆಸರು ಬದಲಿಸಿ ಅದನ್ನು ದ್ವಿತೀಯ ರಾಜಧಾನಿ ಎಂದು ಘೋಷಿಸಿದೆ. ಅಲ್ಲಿ ವಿಧಾನಸಭೆ ಕಟ್ಟಡ ನಿರ್ಮಿಸಿ ಒಂದು ಅಧಿವೇಶನವನ್ನೂ ನಡೆಸಿದೆ ಎಂದು ಆಕ್ಷೇಪಿಸಿದ ಠಾಕ್ರೆ, ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಸ್ವಾರ್ಥ ರಾಜಕೀಯ ಹಿತಾಸಕ್ತಿಯ ಕಾರಣಕ್ಕಾಗಿ ಮರಾಠಿ ಹೋರಾಟವನ್ನು ದುರ್ಬಲಗೊಳಿಸುತ್ತಿದೆ. ಈ ಹಿಂದೆ ಎಂಇಎಸ್ನ ಕನಿಷ್ಠ 6 ಶಾಸಕರಿದ್ದರು. ಬೆಳಗಾವಿಯ ಮೇಯರ್ ಕೂಡಾ ಮರಾಠಿ ಭಾಷಿಗರೇ ಆಗಿದ್ದರು. ಎಂಇಎಸ್ ಅನ್ನು ದುರ್ಬಲಗೊಳಿಸಲು ಶಿವಸೇನೆ ಬಯಸದ ಕಾರಣ ನಾವು ಬೆಳಗಾವಿಯಲ್ಲಿ ರಾಜಕೀಯ ಕಣಕ್ಕೆ ಇಳಿದಿಲ್ಲ. ಈಗ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಮಹಾ ವಿಕಾಸ ಅಘಾಡಿ ಮೈತ್ರಿಕೂಟದ ಅವಧಿಯಲ್ಲಿ ಗಡಿ ವಿವಾದ ಬಗೆಹರಿಯದಿದ್ದರೆ ವಿವಾದ ಮುಂದೆಂದೂ ಇತ್ಯರ್ಥವಾಗದು. ಕರ್ನಾಟಕದಲ್ಲಿ ಯಾವುದೇ ಪಕ್ಷದ ಸರಕಾರವಿರಲಿ, ಅವರ ಉದ್ದೇಶ ಒಂದೇ - ಮರಾಠಿ ಭಾಷಿಕರ ಮತ್ತು ಭಾಷೆಯ ವಿರುದ್ಧ ದೌರ್ಜನ್ಯ ನಡೆಸುವುದು. ಆದ್ದರಿಂದ ಮರಾಠಿ ಜನತೆ ಕೂಡಾ ಒಗ್ಗೂಡಬೇಕು ಎಂದು ಹೇಳಿದರು.
ಈ ಸಂದರ್ಭ ಮಾತನಾಡಿದ ಎನ್ಸಿಪಿ ಅಧ್ಯಕ್ಷ ಶರದ್ ಪವಾರ್, ಗಡಿ ವಿವಾದ ಇತ್ಯರ್ಥಗೊಳಿಸಲು ಕೇಂದ್ರ ಸರಕಾರ 1960ರಲ್ಲಿ ನೇಮಿಸಿದ ಮಹಾಜನ ಆಯೋಗದ ವರದಿ ಶೇ 100% ಮಹಾರಾಷ್ಟ್ರಕ್ಕೆ ವಿರುದ್ಧವಾಗಿದೆ. ಆದ್ದರಿಂದ ನಾವು ಆಯೋಗದ ವರದಿಯನ್ನು ತಿರಸ್ಕರಿಸಿದ್ದೇವೆ ಎಂದರು. ಬ್ಯಾರಿಸ್ಟರ್ ಎಆರ್ ಅಂತುಳೆ ಮಹಾಜನ ಆಯೋಗದ ವರದಿ ತಿರಸ್ಕರಿಸಿ ಒಂದು ಪುಸ್ತಕ ಬರೆದಿದ್ದಾರೆ. ಈ ಪುಸ್ತಕದ ಬಗ್ಗೆಯೂ ಇಂದು (ಬುಧವಾರ) ಬಿಡುಗಡೆಯಾದ ಕೃತಿಯಲ್ಲಿ ಉಲ್ಲೇಖಿಸಬೇಕಿತ್ತು ಎಂದರು. ನಮಗೆ ಈಗ ಸುಪ್ರೀಂಕೋರ್ಟ್ ಕಡೆಯ ಅಸ್ತ್ರವಾಗಿದೆ. ಹೋರಾಡಿ ಗೆಲ್ಲುವ ಹೊರತು ನಮಗೆ ಅನ್ಯ ಆಯ್ಕೆಗಳಿಲ್ಲ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವ ವಹಿಸಿರುವುದು ಒಳ್ಳೆಯ ವಿಷಯ ಎಂದರು.
ದೀಪಕ್ ಪವಾರ್ ಸಂಪಾದಕತ್ವದ ‘ಮಹಾರಾಷ್ಟ್ರ-ಕರ್ನಾಟಕ ಸೀಮಾವಾದ: ಸಂಘರ್ಷ ಅನಿ ಸಂಕಲ್ಪ’ ಎಂಬ 530 ಪುಟಗಳ ಪುಸ್ತಕವನ್ನು ಈ ಸಂದರ್ಭ ಬಿಡುಗಡೆಗೊಳಿಸಲಾಯಿತು.