ರಾಜ್ ದೀಪ್ ಸರ್ದೇಸಾಯಿ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿಲ್ಲ: ಸುಪ್ರೀಂಕೋರ್ಟ್ ಸ್ಪಷ್ಟನೆ
ಹೊಸದಿಲ್ಲಿ: ಟ್ವೀಟ್ ನ ಹಿನ್ನೆಲೆಯಲ್ಲಿ ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿ ಅವರ ವಿರುದ್ಧ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾದಂತೆ ತನ್ನ ವೆಬ್ ಸೈಟ್ ಪ್ರಮಾದವಶಾತ್ ಪ್ರದರ್ಶಿಸಿದೆ ಎಂದು ಸುಪ್ರೀಂಕೋರ್ಟ್ ಮಂಗಳವಾರ ತಡರಾತ್ರಿ ಸ್ಪಷ್ಟನೆ ನೀಡಿದೆ.
ಸುಪ್ರೀಂಕೋರ್ಟ್ ರಾಜ್ ದೀಪ್ ಸರ್ದೇಸಾಯಿ ವಿರುದ್ಧ ಸ್ವಯಂ ಪ್ರೇರಿತವಾಗಿ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ಆರಂಭಿಸಿರುವ ಬಗ್ಗೆ ಕೆಲವು ಸುದ್ದಿ ಚಾನೆಲ್ ಗಳು ಸುದ್ದಿ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ಸ್ಪಷ್ಟನೆ ನೀಡಿದೆ.
ಚಾನೆಲ್ ಗಳಲ್ಲಿ ಸುದ್ದಿ ಪ್ರಸಾರ ವಾದಂತೆ ರಾಜ್ ದೀಪ್ ಸರ್ದೇಸಾಯಿ ಅವರ ವಿರುದ್ದ ಅಂತಹ ಯಾವುದೆ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಅದಾಗ್ಯೂ ಸುಪ್ರೀಂಕೋರ್ಟ್ ನ ವೆಬ್ ಸೈಟ್ ನಲ್ಲಿ ರಾಜ್ ದೀಪ್ ಸರ್ದೇಸಾಯಿ ವಿರುದ್ದ ಪ್ರಕರಣ ದಾಖಲಿಸಿದೆ ಎಂದು ತಪ್ಪಾಗಿ ತೋರಿಸಿದೆ. ಪ್ರಮಾದವನ್ನುಗುರುತಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸುಪ್ರೀಂಕೋರ್ಟ್ ನ ಉಪ ರಿಜಿಸ್ಟ್ರಾರ್ (ಸಾರ್ವಜನಿಕ ವ್ಯವಹಾರ)ರಾಕೇಶ್ ಶರ್ಮಾ ತಿಳಿಸಿದ್ದಾರೆ.