ಸಿದ್ಧಾಪುರದಲ್ಲಿ ಕಾಡಾನೆ ದಾಳಿ: ಕಾಫಿ ತೋಟದ ಕಾವಲುಗಾರ ಮೃತ್ಯು
ಮಡಿಕೇರಿ, ಫೆ.26: ನಿದ್ದೆ ಮಾಡಿದ್ದ ವೇಳೆ ಕಾಡಾನೆ ದಾಳಿ ನಡೆಸಿದ್ದರಿಂದ ಕಾಫಿ ಪಲ್ಪಿಂಗ್ ಕಣದಲ್ಲಿ ಕಾವಲುಗಾರನಾಗಿದ್ದ ಯುವಕನೋರ್ವ ಮೃತಪಟ್ಟ ಘಟನೆ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪ ಕಳೆದ ರಾತ್ರಿ ನಡೆದಿರುವುದು ವರದಿಯಾಗಿದೆ.
ಸಂದೀಪ್(22) ಮೃತಪಟ್ಟವರು. ಇವರು ಸಿದ್ದಾಪುರ ಸಮೀಪ ಬಿಬಿಟಿಸಿ ಬೀಟಿಕಾಡು ತೋಟದಲ್ಲಿ ಕಾವಲುಗಾರನಾಗಿದ್ದರು. ಎಂದಿನಂತೆ ಕರ್ತವ್ಯದಲ್ಲಿದ್ದ ಸಂದೀಪ್ ರಾತ್ರಿ ಮಲಗಿ ನಿದ್ರಿಸಿದ್ದ ವೇಳೆ ಕಾಡಾನೆ ದಾಳಿ ನಡೆಸಿದೆಯೆನ್ನಲಾಗಿದೆ. ಈ ವೇಳೆ ಆನೆಯು ಸಂದೀಪ್ ಅವರ ತಲೆಗೆ ತುಳಿದ ಪರಿಣಾಮ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಈ ವೇಳೆ ಜೊತೆಗಿದ್ದ ಇನ್ನೋರ್ವ ಕಾರ್ಮಿಕ ರಾಜು ಎಂಬವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story