ಹುಣಸೋಡು ಸ್ಫೋಟ ಪ್ರಕರಣ: ಆರೋಪಿಗಳಿಗೆ ಜಾಮೀನು ನಿರಾಕರಣೆ
ಫೈಲ್ ಫೋಟೋ
ಶಿವಮೊಗ್ಗ, ಫೆ.26: ತಾಲೂಕಿನ ಹುಣಸೋಡುವಿನ ಕ್ರಷರ್ ನಲ್ಲಿ ಕಳೆದ ತಿಂಗಳು ಸಂಭವಿಸಿದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿಗಳಾದ ಬಿ.ವಿ ಸುಧಾಕರ್, ಎಸ್.ಟಿ.ಕುಲಕರ್ಣಿ ಮತ್ತು ಅವಿನಾಶ್ ಕುಲಕರ್ಣಿ ಎಂಬವರ ಜಾಮೀನು ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ.
ಮಂಗಳವಾರ ಅರ್ಜಿ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಸ್.ಎಂ.ಮುಸ್ತಫ ಹುಸೇನ್ ಜಾಮೀನು ನಿರಾಕರಿಸಿದರು. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಕ್ರಷರ್ ಮಾಲಕ ಸುಧಾಕರ್ ಹಾಗೂ ಭೂಮಿ ಮಾಲಕ ಕುಲಕರ್ಣಿ ಎಂಬವರನ್ನು ಬಂಧಿಸಿದ್ದರು. ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಪೊಲೀಸರು ಕಲೆ ಹಾಕಿದ ಸಾಕ್ಷಿಗಳ ಮೇಲೆ ವಾದ ಮಂಡಿಸಿದ ಸರ್ಕಾರಿ ಅಭಿಯೋಜಕಿ ಪಿ.ಒ.ಪುಷ್ಪಾ ಆರೋಪಿಗಳಿಗೆ ಜಾಮೀನು ನೀಡಲು ಆಕ್ಷೇಪ ವ್ಯಕ್ತಪಡಿಸಿದರು.
ಜ.21ರಂದು ಹುಣಸೋಡು ಕ್ರಷರ್ ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಆರು ಮಂದಿ ಸಾವನ್ನಪ್ಪಿದ್ದರು. ಈ ಸಂಬಂಧ 10 ಮಂದಿಯನ್ನು ಬಂಧಿಸಲಾಗಿದೆ.
Next Story