ತುಳು ಸಾಹಿತ್ಯ ಅಕಾಡಮಿಯ 2018,2019,2020ನೆ ಸಾಲಿನ ಗೌರವ ಪ್ರಶಸ್ತಿ ಪ್ರಕಟ
ಮಂಗಳೂರು, ಫೆ.26: ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ 2018, 2019, 2020ನೇ ಸಾಲಿನ ಗೌರವ ಪ್ರಶಸ್ತಿ ಪ್ರಕಟಗೊಂಡಿದೆ. ಅಕಾಡಮಿಯ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ಶುಕ್ರವಾರ ತುಳು ಚಾವಡಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಗೌರವ ಪ್ರಶಸ್ತಿಯನ್ನು ಪ್ರಕಟಿಸಿದ್ದಾರೆ.
2020ನೆ ಸಾಲಿನ ಗೌರವ ಪ್ರಶಸ್ತಿಗೆ ರಾಮಚಂದರ್ ಬೈಕಂಪಾಡಿ (ತುಳು ಸಾಹಿತ್ಯ), ತುಂಗಪ್ಪ ಬಂಗೇರ (ತುಳು ನಾಟಕ), ಆನಂದ ಪೂಜಾರಿ ಹಳೆಯಂಗಡಿ (ತುಳು ಜಾನಪದ), 2019ನೇ ಸಾಲಿನ ಗೌರವ ಪ್ರಶಸ್ತಿಗೆ ಡಾ.ಎಸ್.ಆರ್.ವಿಘ್ನರಾಜ್ ಧರ್ಮಸ್ಥಳ (ತುಳು ಸಾಹಿತ್ಯ), ದಿ.ತಿಮ್ಮಪ್ಪ ಗುಜರನ್ ತಲಕಳ (ತುಳು ಯಕ್ಷಗಾನ), ಗುರುವ ಕೊರಗ ಹಿರಿಯಡ್ಕ (ತುಳು ಜಾನಪದ) ಆಯ್ಕೆಯಾಗಿದ್ದಾರೆ.
2018ನೇ ಸಾಲಿನಲ್ಲಿ ಘೋಷಣೆಯಾಗಿದ್ದ ಲಲಿತಾ ಆರ್.ರೈ (ತುಳು ಸಾಹಿತ್ಯ), ರತ್ನಾಕರ ರಾವ್ ಕಾವೂರು (ತುಳು ನಾಟಕ), ಎ.ಕೆ. ವಿಜಯ್ (ತುಳು ಸಿನಿಮಾ ಕ್ಷೇತ್ರ) ಹೀಗೆ ಈ ಮೂರು ವರ್ಷಗಳಲ್ಲಿ ಆಯ್ಕೆಯಾದ 9 ಮಂದಿ ಸಾಧಕರಿಗೆ ಮಾ.7ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗೌರವ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಗೌರವ ಪ್ರಶಸ್ತಿಯು 50 ಸಾವಿರ ರೂ., ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರಗಳನ್ನು ಒಳಗೊಂಡಿದೆ ಎಂದು ದಯಾನಂದ ಕತ್ತಲ್ಸಾರ್ ತಿಳಿಸಿದರು.
ಪುಸ್ತಕ ಬಹುಮಾನ: 2020ನೇ ಸಾಲಿನ ತುಳು ಕವನ ವಿಭಾಗದಲ್ಲಿ ಡಾ.ಕೆ.ಚಿನ್ನಪ್ಪ ಗೌಡರ ‘ಕೆಲೆಪು ಪೆರಡೆ ಕೆಲೆಪು’, 2019ನೇ ಸಾಲಿನಲ್ಲಿ ತುಳು ಕವನ ವಿಭಾಗದಲ್ಲಿ ಕುಶಾಲಾಕ್ಷಿ ವಿ.ಕುಲಾಲ್ ಕಣ್ವತೀರ್ಥ ಅವರ ‘ಪನಿ ಮುತ್ತು ಮಾಲೆ’ ಹಾಗೂ 2018ನೇ ಸಾಲಿನಲ್ಲಿ ತುಳು ಕವನ ವಿಭಾಗದಲ್ಲಿ ಶಾಂತಾರಾಮ್ ವಿ ಶೆಟ್ಟಿ ಅವರ ‘ಮಣ್ಣ ಬಾಜನೊ’, ರಾಜಶ್ರೀ ಟಿ.ರೈ ಪೆರ್ಲ ಅವರ ತುಳು ಕಾದಂಬರಿ ‘ಕೊಂಬು’ ಆಯ್ಕೆಯಾಗಿದೆ. ಪುಸ್ತಕ ಬಹುಮಾನ 25 ಸಾವಿರ ರೂ.,ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ಒಳಗೊಂಡಿದೆ.
2020ನೇ ಸಾಲಿನಲ್ಲಿ ವಿಶೇಷ ಬಾಲ ಪ್ರತಿಭೆ ವಿಭಾಗದಲ್ಲಿ ತುಳುನಾಡ ಯೋಗ ಕ್ಷೇತ್ರದಲ್ಲಿ ತನುಶ್ರೀ ಪಿತ್ರೋಡಿ, ತುಳುನಾಡ ಕಲಾ ಕ್ಷೇತ್ರ ಸನ್ನಿಧಿ ಟಿ.ರೈ ಪೆರ್ಲ, ತುಳು ಜಾನಪದ ಕ್ಷೇತ್ರ ತಕ್ಷಿಲ್ ದೇವಾಡಿಗ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 10 ಸಾವಿರ ರೂ., ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ.
2020ನೇ ಸಾಲಿನ ಯುವ ಪ್ರತಿಭೆ ವಿಭಾಗದಲ್ಲಿ ತುಳು ಭಾಷಾ ಸಂಘಟಕ ಯೋಗೀಶ್ ಶೆಟ್ಟಿ ಜೆಪ್ಪು, ತುಳು ನಿರೂಪಣಾ ಕ್ಷೇತ್ರದಲ್ಲಿ ನವೀನ್ ಶೆಟ್ಟಿ ಎಡ್ಮೆಮಾರ್, ತುಳು ಜಾನಪದ ಕಲಾ ಸಂಘಟಕ ರಮೇಶ್ ಪಿ.ಮೆಟ್ಟಿನಡ್ಕ, ತುಳುನಾಡ ದೈವ ಕ್ಷೇತ್ರದ ಸಂಶೋಧಕ ನಾಗರಾಜ ಭಟ್ ಬಂಟ್ವಾಳ, ತುಳುನಾಡ ಕಲಾ ಪೋಷಕ ಭರತ್ ಸೌಂದರ್ಯ, ತುಳು ಶಾಸನ ಸಂಶೋಧನಾ ಕ್ಷೇತ್ರ ಸುಭಾಷ್ ನಾಯಕ್ ಬಂಟಕಲ್, ತುಳು ಲಿಪಿ ಪರಿಶೋಧಕ ದೀಪಕ್ ಪಡುಕೋಣೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
2020ನೇ ಸಾಲಿನ ಸಂಘಟನಾ ಪ್ರಶಸ್ತಿಗೆ ತುಳು ಕೂಟ ಕುವೈತ್, ತುಳು ಸಂಘ ಬರೋಡ, ಬೆಂಗಳೂರು ತುಳು ಕೂಟ, ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ತೋಕೂರು-ಹಳೆಯಂಗಡಿ, ತುಳುಕೂಟ ಉಡುಪಿ ಆಯ್ಕೆಯಾಗಿದೆ.
ಸುದ್ದಿಗೋಷ್ಠಿಯಲ್ಲಿ ಅಕಾಡಮಿಯ ರಿಜಿಸ್ಟ್ರಾರ್ ರಾಜೇಶ್ ಜಿ. ಮತ್ತು ಸದಸ್ಯರಾದ ಲೀಲಾಕ್ಷ ಕರ್ಕೇರಾ, ನರೇಂದ್ರ ಕೆರೆಕಾಡು, ವಿಜಯಲಕ್ಷ್ಮಿ ಶೆಟ್ಟಿ, ರವೀಂದ್ರ ಶೆಟ್ಟಿ ಬಳಂಜ, ನಾಗೇಶ್ ಕುಲಾಲ್, ಮಲ್ಲಿಕಾ ಅಜಿತ್ ಶೆಟ್ಟಿ, ಕಡಬ ದಿನೇಶ್ ರೈ, ನಿಟ್ಟೆ ಶಶಿಧರ ಶೆಟ್ಟಿ, ಉಮೇಶ್ ಆಚಾರ್ಯ, ಚೇತಕ ಪೂಜಾರಿ, ಸಂತೋಷ್ ಪೂಜಾರಿ ಉಪಸ್ಥಿತರಿದ್ದರು.