ಮಂಗಳೂರು: ಮೂರನೇ ಹಂತದ ಕೊರೋನ ಲಸಿಕೆ ವಿತರಣೆ
ಮಂಗಳೂರು, ಮಾ.1: ಕೋವಿಡ್ ನಿರೋಧಕ ಲಸಿಕೆ ಕೋವಿಶೀಲ್ಡ್ನ ಮೂರನೇ ಹಂತದ ಕೊರೋನ ಲಸಿಕೆಯ ವಿತರಣೆಯು ಸೋಮವಾರ ನಗರದ ವೆನ್ಲಾಕ್ ಹತ್ತಿರದ ಆಯುಷ್ ಆಸ್ಪತ್ರೆಯಲ್ಲಿ ನಡೆಯಿತು.
ಮೊದಲ ದಿನ 39 ಮಂದಿ ಹಿರಿಯ ನಾಗರಿಕರು ಲಸಿಕೆ ಸ್ವೀಕಾರ ಮಾಡಿದರು.
ವಿಶೇಷವಾಗಿ ಮಂಗಳೂರಿನ ನಿವಾಸಿ 99ರ ಹರೆಯದ ಟ್ರಾಫಿಕ್ ವಾರ್ಡನ್ ಆಗಿರುವ ಜೋಸೆಫ್ ಗೊನ್ಸಾಲ್ವಿನ್ ಮಸ್ಕರೇನಸ್ ಲಸಿಕೆ ಸ್ವೀಕಾರ ಮಾಡಿದ ಹಿರಿಯ ನಾಗರಿಕ. ಇದರ ಜತೆಗೆ ಫಾದರ್ ಮುಲ್ಲರ್ಸ್ ಕಾಲೇಜಿನ ಮೆಡಿಸಿನ್ ವಿಭಾಗದ ನಿವೃತ್ತ ಡಾ. ಸುಂದರ ಭಟ್ ಲಸಿಕೆಯ ಸ್ವೀಕಾರ ಮಾಡಿದ ಗಣ್ಯರಲ್ಲಿ ಸೇರಿಕೊಂಡಿದ್ದಾರೆ.
ಮಂಗಳವಾರ ತಾಲೂಕಿನಲ್ಲೂ ಆರಂಭ: ಮೂರನೇ ಹಂತದ ಲಸಿಕೆ ವಿತರಣೆ ಕಾರ್ಯಕ್ರಮದ ಉದ್ಘಾಟನೆಯು ಜಿಲ್ಲಾ ಮಟ್ಟದಲ್ಲಿ ನಡೆದ ಬಳಿಕ ಮಾ.2ರಿಂದ ತಾಲೂಕು ಕೇಂದ್ರ ಆಸ್ಪತ್ರೆಯಲ್ಲಿ ಲಸಿಕೆ ನೀಡುವ ಕಾರ್ಯಕ್ರಮಗಳಿಗೂ ಚಾಲನೆ ಸಿಗಲಿದೆ.
ಈ ಬಾರಿ ಗ್ರಾಪಂ ಉಪಕೇಂದ್ರದಲ್ಲೂ ಲಸಿಕೆ ಪಡೆಯುವ ಅವಕಾಶ ಸಿಗಲಿದೆ. ಮೊದಲ ದಿನ ಬಹಳಷ್ಟು ಹಿರಿಯ ನಾಗರಿಕರು ಲಸಿಕೆ ಸ್ವೀಕಾರ ಮಾಡಲು ಬಂದಿದ್ದರು. ಆದರೆ ಕೋವಿನ್ ವೆಬ್ಸೈಟ್ನ ಕೆಲವೊಂದು ತಾಂತ್ರಿಕ ಸಮಸ್ಯೆಯಿಂದ ನೋಂದಣಿ ಮಾಡಿ ಲಸಿಕೆ ಸ್ವೀಕಾರ ಮಾಡಲು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆದುಕೊಳ್ಳುವ ನಿರೀಕ್ಷೆಯಿದೆ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ ತಿಳಿಸಿದ್ದಾರೆ.