ಸಕಾಲದ ಯೋಜನೆಯಡಿ ಅರ್ಜಿ : ಕಾಲಾವಧಿಯೊಳಗೆ ವಿಲೇವಾರಿ ಮಾಡಲು ಅಪರ ಜಿಲ್ಲಾಧಿಕಾರಿ ಸೂಚನೆ
ಮಂಗಳೂರು, ಮಾ.1: ಸಾರ್ವಜನಿಕರಿಂದ ವಿವಿಧ ಇಲಾಖೆಗಳಲ್ಲಿ ಸಕಾಲದ ಯೋಜನೆಯಡಿ ಸ್ವೀಕೃತವಾದ ಅರ್ಜಿಗಳನ್ನು ನಿಗಧಿತ ಕಾಲಾವಧಿಯ ಒಳಗೆ ನಿಯಮಾನುಸಾರ ವಿಲೇವಾರಿ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪಾ ಸೂಚಿಸಿದ್ದಾರೆ.
ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ದ.ಕ. ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಕಾಲ ಯೋಜನೆಯಡಿ 98 ಇಲಾಖೆಗಳಲ್ಲಿ 1,025ಕ್ಕೂ ಹೆಚ್ಚು ಸೇವೆಗಳನ್ನು ಒದಗಿಸಲಾಗುತ್ತಿದೆ. ಸಕಾಲದ ವ್ಯಾಪ್ತಿಯಲ್ಲಿ ಬರುವ ಸೇವೆಗಳನ್ನು ಸಕಾಲದ ಅಡಿಯಲ್ಲಿ ಅರ್ಜಿಗಳನ್ನು ಸ್ವೀಕರಿಸಿ ವಿಳಂಬವಿಲ್ಲದೆ ನಿಗಧಿತ ಕಾಲಾವಧಿಯ ಒಳಗೆ ವಿಲೇವಾರಿ ಮಾಡಬೇಕು ಎಂದ ಅವರು ರಾಜ್ಯ ದಲ್ಲಿ ದ.ಕ. ಜಿಲ್ಲೆಯು ಸಕಾಲ ಅರ್ಜಿಗಳ ವಿಲೇವಾರಿಯಲ್ಲಿ 6ನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಜನವರಿ ತಿಂಗಳಲ್ಲಿ 93.477 ಅರ್ಜಿಗಳು ಬಂದಿದ್ದು, 80,661 ಅರ್ಜಿಗಳು ವಿಲೇವಾರಿಯಾಗಿದೆ. 4,483 ಅರ್ಜಿಗಳು ತಿರಸ್ಕೃತವಾಗಿವೆ. ಮಂಗಳೂರು ತಾಲೂಕಿನಲ್ಲಿ 36,085 ಅರ್ಜಿ ಸ್ವೀಕೃತಿ ಯಾಗಿ 34,389 ವಿಲೇವಾರಿಯಾಗಿವೆ ಎಂದರು.
ಪ್ರತಿ ಜಿಲ್ಲೆಯಲ್ಲಿ ಸಕಾಲ ಅನುಷ್ಠಾನದ ಪರಿಶೀಲನೆಗಾಗಿ ಸಮನ್ವಯ ಸಮಿತಿ ಹಾಗೂ ಪರಿಶೀಲನಾ ಸಮಿತಿಯನ್ನು ರಚಿಸಲಾಗಿದೆ. ಸಮನ್ವಯ ಸಮಿತಿಯ ತಂಡವು ಇಲಾಖೆಗಳ ನಡುವೆ ಸಮನ್ವಯ ಕುರಿತಾದ ವಿಷಯಗಳ ಬಗ್ಗೆ ಪ್ರತಿ ಸೋಮವಾರ ಸಭೆ ಕರೆದು ಸಕಾಲ ಯೋಜನೆಯ ಪರಿಶೀಲನೆ ನಡೆಸುತ್ತದೆ. ಪರಿಶೀಲನಾ ಸಮಿತಿಯ ತಂಡವು ಪ್ರತಿ ಶನಿವಾರ ಅವರ ವ್ಯಾಪ್ತಿಯ ವಿವಿಧ ಸರಕಾರಿ ಕಚೇರಿಗಳಿಗೆ ಭೇಟಿ ನೀಡಿ ತಪಾಸಣೆ ನಡೆಸುವ ಕಾರ್ಯವನ್ನು ಮಾಡಬೇಕು ಎಂದರು.
ಸಭೆಯಲ್ಲಿ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್ ಮತ್ತಿತರರು ಅಧಿಕಾರಿಗಳು ಉಪಸ್ಥಿತರಿದ್ದರು.