ಪತಿ-ಪತ್ನಿಯ ಜಗಳ ಪತಿಯ ಹತ್ಯೆಯಲ್ಲಿ ಅಂತ್ಯ
ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ನಾವೂರದಲ್ಲಿ ಘಟನೆ
ಉಮಾವತಿ
ಬಂಟ್ವಾಳ, ಫೆ.6: ಪತಿ-ಪತ್ನಿ ಮಧ್ಯೆ ನಡೆದ ಜಗಳದಲ್ಲಿ ಪತ್ನಿಯ ಕತ್ತಿ ಏಟಿನಿಂದ ಗಾಯಗೊಂಡಿದ್ದರೆನ್ನಲಾಗಿದ್ದ ಪತಿ ಮೃತಪಟ್ಟ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಾವೂರ ಗ್ರಾಮದಲ್ಲಿ ಶುಕ್ರವಾರ ನಡೆದಿರುವುದು ವರದಿಯಾಗಿದೆ.
ನಾವೂರ ಸೂರ ಕ್ವಾರ್ಟರ್ಸ್ ನಿವಾಸಿ ಸೇಸಪ್ಪ ಪೂಜಾರಿ(60) ಕೊಲೆಯಾದವರು. ಕೊಲೆ ಆರೋಪದಡಿ ಸೇಸಪ್ಪ ಅವರ ಪತ್ನಿ ಉಮಾವತಿ (52)ಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸೇಸಪ್ಪ ಕೂಲಿ ಕೆಲಸ ಮಾಡುತ್ತಿದ್ದರು. ಮದ್ಯಪಾನಿಯಾಗಿದ್ದ ಪತಿ-ಪತ್ನಿ ಮಧ್ಯೆ ದಿನ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಅದೇರೀತಿ ಮಾ.3ರಂದು ರಾತ್ರಿ ಇವರೊಳಗೆ ಗಲಾಟೆ ನಡೆದು ಹೊಡೆದಾಟದ ಹಂತಕ್ಕೆ ತಲುಪಿದ್ದು ಈ ವೇಳೆ ಉಮಾವತಿ ಮನೆಯಲ್ಲಿದ್ದ ಕತ್ತಿಯಿಂದ ಸೇಸಪ್ಪರಿಗೆ ಹೊಡೆದಿದ್ದರೆನ್ನಲಾಗಿದೆ. ಇದರಿಂದ ಸೇಸಪ್ಪ ಅವರ ಬಲಹಣೆಗೆ ಗಾಯವಾಗಿತ್ತು ಎನ್ನಲಾಗಿದೆ.
ಗಾಯದಿಂದ ರಕ್ತ ಸೋರುತ್ತಿದ್ದರೂ ಅವರು ಚಿಕಿತ್ಸೆ ಪಡೆಯದೆ ಮನೆಯಲ್ಲೇ ಉಳಿದಿದ್ದರು. ರಕ್ತಸ್ರಾವವಾದ್ದರಿಂದ ಹುಷಾರಿಲ್ಲ ಎಂದು ಮಲಗಿದ್ದ ಸೇಸಪ್ಪ ಅಲ್ಲಿಯೇ ಮಾ.5ರಂದು ಸಂಜೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.