ಇನ್ನೂ ಮೂವರು ಸಚಿವರು ಕೋರ್ಟ್ ಮೆಟ್ಟಿಲೇರಲಿದ್ದಾರೆ: ಎಸ್.ಟಿ.ಸೋಮಶೇಖರ್
ಬೆಂಗಳೂರು, ಮಾ.6: ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ವರದಿ ಪ್ರಸಾರ ಮಾಡದಂತೆ ಇನ್ನೂ ಮೂವರು ಸಚಿವರು ನ್ಯಾಯಾಲಯದ ಮೆಟ್ಟಿಲೇರಲಿದ್ದಾರೆ ಎಂದು ರಾಜ್ಯ ಸಹಕಾರಿ ಸಚಿವ ಎಸ್ .ಟಿ.ಸೋಮಶೇಖರ್ ತಿಳಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕೆ.ಗೋಪಾಲಯ್ಯ, ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್ ಅವರು ಕೂಡಾ ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ವರದಿ ಪ್ರಸಾರ ಮಾಡದಂತೆ ನಿರ್ದೇಶಿಸಲು ಕೋರಿ ಇಂದು ಅಥವಾ ಸೋಮವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದಾರೆ ಎಂದು ಹೇಳಿದರು.
ತನ್ನನ್ನು ಇದುವರೆಗೂ ಯಾರು ಬ್ಲಾಕ್ ಮೇಲ್ ಮಾಡಿಲ್ಲ. ಇಷ್ಟು ವರ್ಷ ರಾಜಕಾರಣದ ಮಾಡಿಕೊಂಡು ಬಂದಿದ್ದೇವೆ. ಆದರೆ ಕ್ಷಣ ಮಾತ್ರದಲ್ಲಿ ಟಿವಿಯಲ್ಲಿ ಏನೋ ಸುದ್ದಿ ಬಿತ್ತರಗೊಂಡರೆ ಹೇಗೆ?. ಆದ್ದರಿಂದ ಯಾವುದೇ ರೀತಿಯಲ್ಲಿ ನಮ್ಮ ತೇಜೋವಧೆ ಆಗಬಾರದು ಎಂಬ ಕಾರಣಕ್ಕೆ ನಾವುಗಳು ಕೋರ್ಟ್ ಗೆ ಹೋಗಿದ್ದೇವೆ ಎಂದು ಸ್ಪಷ್ಟಪಡಿಸಿದರು.
ನಮ್ಮ ವಿರುದ್ಧ ಮಾತನಾಡಲೇಬಾರದು ಅಂಥಲ್ಲ. ನಾನು ನಿರ್ವಹಿಸುತ್ತಿರುವ ಇಲಾಖೆಯ ಬಗ್ಗೆ, ನನ್ನ ಬಗ್ಗೆ ಟೀಕೆ ಮಾಡಬಹುದು. ಆದರೆ, ವೈಯಕ್ತಿಕವಾಗಿ ತೇಜೋವಧೆ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದು ಸಚಿವ ಸೋಮಶೇಖರ್ ನುಡಿದರು.