ಸಿಡಿ ಪ್ರಹಸನ: ಸಚಿವರ ಮಂಪರು ಪರೀಕ್ಷೆಗೆ ಕಿಸಾನ್ ಕಾಂಗ್ರೆಸ್ ಆಗ್ರಹ
ಸಚಿನ್ ಮೀಗಾ (Photo Twitter @meega_sachin)
ಬೆಂಗಳೂರು, ಮಾ.6: ತಮ್ಮ ವಿರುದ್ಧ ಯಾವುದೇ ಆಕ್ಷೇಪಾರ್ಹ ಸುದ್ದಿಗಳನ್ನು ಪ್ರಸಾರ ಮಾಡದಿರುವಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಬೇಕೆಂದು ಕೋರ್ಟ್ ಮೊರೆ ಹೋಗಿರುವ ಆರು ಸಚಿವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಎಂದು ಕೆಪಿಸಿಸಿ ಕಿಸಾನ್ ಘಟಕದ ರಾಜ್ಯಾಧ್ಯಕ್ಷ ಸಚಿನ್ ಮೀಗಾ ಆಗ್ರಹಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರದ ಪ್ರಮುಖ ಆರು ಸಚಿವರ ಅರ್ಜಿ ವಜಾಗೊಳಿಸುವಂತೆ ಕೋರಿ ನ್ಯಾಯಾಲಯದ ಮೇಟ್ಟಿಲೇರಿದ್ದು, ಶೀಘ್ರದಲ್ಲಿಯೇ ಅರ್ಜಿ ಸಲ್ಲಿಕೆ ಮಾಡಲಾಗುವುದು ಎಂದು ಹೇಳಿದರು.
ಸಚಿವರು ಹಾಗೂ ದೂರುದಾರ ದಿನೇಶ್ ಕಲ್ಲಹಳ್ಳಿ ಅವರಿಗೆ ಸಿಡಿ ವಿಚಾರವಾಗಿ ಮಂಪರು ಪರೀಕ್ಷೆ ನಡೆಸಲು ನಿರ್ದೇಶನ ನೀಡುವಂತೆಯೂ ನ್ಯಾಯಾಲಯದಲ್ಲಿ ಕೋರಲಾಗುವುದು ಎಂದರು.
ಇಂತಹ ಸಿಡಿಗಳು ಪ್ರಸಾರಕ್ಕೆ ಅಡ್ಡಿ ಇದ್ದಲ್ಲಿ ಇದನ್ನು ರಾಜ್ಯಪಾಲರಿಗೆ ನೀಡಿ ಮಂತ್ರಿಗಳನ್ನು ವಜಾ ಮಾಡುವಂತೆ ನ್ಯಾಯಾಲಯದಲ್ಲಿ ಕೋರಲಾಗುವುದು. ಅಲ್ಲದೆ, ಸಚಿವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವುದನ್ನು ನೋಡಿದರೆ ಇವರುಗಳು ತಕ್ಷಣ ಮಂತ್ರಿಗಿರಿಗೆ ರಾಜೀನಾಮೆ ನೀಡಬೇಕು ಎಂದು ಸಚಿನ್ ಮೀಗಾ ಆಗ್ರಹಿಸಿದರು.