ಬೆಂಗಳೂರು: ಕೊಟ್ಟಿಗೆಗೆ ನುಗ್ಗಿ ನಾಲ್ಕು ಕುರಿಗಳನ್ನು ಕೊಂದ ಚಿರತೆ
ಸಾಂದರ್ಭಿಕ ಚಿತ್ರ
ಬೆಂಗಳೂರು, ಎ.6: ಇಲ್ಲಿನ ಮಾಕಳಿ ಬೆಟ್ಟದ ತಪ್ಪಲಲ್ಲಿರುವ ಗ್ರಾಮಕ್ಕೆ ಸೋಮವಾರ ತಡರಾತ್ರಿ ನುಗ್ಗಿದ ಚಿರತೆಯೊಂದು, ಕುರಿಗಳ ಕೊಟ್ಟಿಗೆಗೆ ನುಗ್ಗಿ ನಾಲ್ಕು ಕುರಿಗಳನ್ನು ಕೊಂದಿದೆ.
ದೊಡ್ಡಬಳ್ಳಾಪುರ ತಾಲೂಕಿನ ಮಾಕಳಿ ಬೆಟ್ಟದ ಅಂಚಿನಲ್ಲಿರುವ ಸೊಣ್ಣೇನಹಳ್ಳಿಯ ಗ್ರಾಮದ ಚೆನ್ನರಾಯಪ್ಪ ಮತ್ತು ಜಯಲಕ್ಷ್ಮಮ್ಮ ಎಂಬವರ ಮನೆಯ ಬಳಿ ಸೋಮವಾರ ರಾತ್ರಿ 10:30ರ ಸುಮಾರಿಗೆ ಚಿರತೆ ದಾಳಿ ನಡೆಸಿದ್ದು, ಈ ವೇಳೆ ಕೊಟ್ಟಿಗೆಯೊಳಗೆ ಕೂಡಿ ಹಾಕಲಾಗಿದ್ದ ನಾಲ್ಕು ಕುರಿಗಳನ್ನು ಕೊಂದಿದೆ.
ಕುರಿಗಳು ಚೀರಿಕೊಂಡ ಶಬ್ದ ಕೇಳಿ ಮನೆಯಿಂದ ಹೊರ ಬಂದಾಗ ಕೊಟ್ಟಿಗೆಯಲ್ಲಿ ಚಿರತೆ ಕಾಣಿಸಿಕೊಂಡಿದೆ. ಆನಂತರ, ಜನರನ್ನು ನೋಡಿ ಪರಾರಿಯಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಎಸ್.ಮರಿಯಪ್ಪ, ಈಗಾಗಲೇ ಜಿಲ್ಲೆಯಲ್ಲಿ 4 ಚಿರತೆಗಳನ್ನು ಸೆರೆ ಹಿಡಿದು ಬೇರೆಡೆ ಬಿಡಲಾಗಿದೆ. ಚಿರತೆ ದಾಳಿಯಿಂದ ಸತ್ತ ಜಾನುವಾರುಗಳ ಮಾಲಕರಿಗೆ ಪರಿಹಾರ ಕೊಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.