ಕ್ಷುಲ್ಲಕ ಕಾರಣಕ್ಕೆ ಮೂರು ವರ್ಷದ ಪುತ್ರಿಯನ್ನೆ ಕೊಲೆಗೈದ ತಾಯಿ
ಬೆಂಗಳೂರು. ಎ.7: ಕ್ಷುಲ್ಲಕ ಕಾರಣಕ್ಕೆ ಮೂರು ವರ್ಷದ ಪುತ್ರಿಯನ್ನೆ ತಾಯಿ ಕೊಲೆಗೈದಿರುವ ಘಟನೆ ಇಲ್ಲಿನ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಲ್ಲತಹಳ್ಳಿಯ ವಿನುತಾ(3) ಎಂಬಾಕೆ ಮೃತ ಬಾಲಕಿಯಾಗಿದ್ದು, ಕೊಲೆಗೈದ ಆರೋಪದಡಿ ತಾಯಿ ಸುಧಾರನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಕೊಲೆಯಾದ ವಿನುತಾ, ಪೋಷಕರೊಂದಿಗೆ ಮಲ್ಲತಹಳ್ಳಿಯಲ್ಲಿ ವಾಸಿಸುತ್ತಿದ್ದು, ಆರೋಪಿ ಸುಧಾ ಟೈಲ್ಸ್ ಅಂಗಡಿಯೊಂದರಲ್ಲಿ ಬೆಳಗ್ಗೆ 9 ಗಂಟೆಗೆ ಕೆಲಸಕ್ಕೆ ಹೋಗಿ ಮಧ್ಯಾಹ್ನ 12ಕ್ಕೆ ಹಿಂದಿರುಗುತ್ತಿದ್ದರು. ನಿನ್ನೆ ಮಧ್ಯಾಹ್ನ ಸುಮಾರಿಗೆ ಸುಧಾ ಮತ್ತು ಈರಣ್ಣ ನಡುವೆ ಕ್ಷುಲ್ಲಕ ಕಾರಣಕ್ಕೆ ಜಳಗವಾಗಿದ್ದು, ಈ ವೇಳೆ ವಿನುತಾ ತಂದೆ ಪರವಾಗಿ ಮಾತನಾಡಿದ್ದಾಳೆ. ಇದರಿಂದ ಕೋಪಗೊಂಡ ಸುಧಾ ನಿನ್ನೆ ಸಂಜೆ ಮಗು ವಿನುತಾಳನ್ನು ದೀಪಾ ಕಾಂಪ್ಲೆಕ್ಸ್ ಬಳಿಯ ನಿರ್ಮಾಣಹಂತದ ಕಟ್ಟಡದ ಬಳಿ ವೇಲ್ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಳೆ ಎನ್ನಲಾಗಿದೆ.
ಬಳಿಕ ಮನೆಗೆ ಬಂದಿದ್ದು, ಕೆಲಸ ಮುಗಿಸಿಕೊಂಡು ಪತಿ ಈರಣ್ಣ ಬಂದಾಗ ಮಗಳು ಗೋಬಿ ಮಂಚೂರಿ ತಿನ್ನಲು ಕರೆದೊಯ್ದ ವೇಳೆ ಕಾಣೆಯಾಗಿರುವುದಾಗಿ ತಿಳಿಸಿದ್ದಾಳೆ. ಆತಂಕಗೊಂಡ ಈರಣ್ಣ ಸ್ನೇಹಿತನ ಜತೆ ಹುಡುಕಾಟ ನಡೆಸಿ ಕೊನೆಗೆ ಜ್ಞಾನಭಾರತಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದರನ್ವಯ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.