ರಾತ್ರಿ ಕರ್ಫ್ಯೂ: ದಿಲ್ಲಿ ಹೋಟೆಲ್ಗಳ ಆದಾಯ ಶೇ.70 ಕುಸಿತ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಎ.10: ಕೋವಿಡ್-19 ಸೋಂಕು ನಿಯಂತ್ರಿಸುವ ಸಲುವಾಗಿ ದಿಲ್ಲಿಯಲ್ಲಿ ಮಂಗಳವಾರದಿಂದ ರಾತ್ರಿ ಕರ್ಫ್ಯೂ ಜಾರಿಗೊಳಿಸಿದ ಬಳಿಕ ವಹಿವಾಟು ಶೇ.70ರಷ್ಟು ಕುಸಿದಿದೆ ಎಂದು ರೆಸ್ಟೋರೆಂಟ್ಗಳ ಮಾಲಕರು ಅಲವತ್ತುಕೊಂಡಿದ್ದಾರೆ. ಬೆಂಗಳೂರು, ಮಂಗಳೂರು, ಉಡುಪಿ, ಮಣಿಪಾಲ ಸೇರಿದಂತೆ ಕರ್ನಾಟಕದ ಎಂಟು ನಗರಗಳಲ್ಲೂ ಶನಿವಾರದಿಂದ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ.
ಕಳೆದ ವರ್ಷದ ರಾಷ್ಟ್ರವ್ಯಾಪಿ ಲಾಕ್ಡೌನ್ ಪರಿಣಾಮದಿಂದ ಹೊರಬರಲು ಹೋಟೆಲ್ ಉದ್ಯಮ ಪ್ರಯತ್ನಿಸುತ್ತಿರುವ ನಡುವೆಯೇ ರಾತ್ರಿ ಕರ್ಫ್ಯೂ ನಿರ್ಧಾರ ಉದ್ಯಮ ಹಿತಾಸಕ್ತಿಗೆ ಬಲವಾದ ಹೊಡೆತ ನೀಡಿದೆ ಎಂದು ಮಾಲಕರು ಪ್ರತಿಪಾದಿಸಿದ್ದಾರೆ. ಕರ್ಫ್ಯೂ ನಿಯಮಾವಳಿ ಪ್ರಕಾರ ರೆಸ್ಟೋರೆಂಟ್ಗಳನ್ನು ರಾತ್ರಿ 9ರ ಒಳಗಾಗಿ ಮುಚ್ಚಬೇಕು. ಇದು ಮಾರಾಟಕ್ಕೆ ಅತ್ಯಂತ ಮಹತ್ವದ ಅವಧಿ ಎಂದು ಹೇಳಿದ್ದಾರೆ.
ಎಪ್ರಿಲ್ 30ರವರೆಗೆ ರಾಜಧಾನಿಯಲ್ಲಿ ರಾತ್ರಿ 10ರಿಂದ ಮುಂಜಾನೆ 5ರವರೆಗೆ ಕರ್ಫ್ಯೂ ವಿಧಿಸಲಾಗಿದೆ. ಜನಸಾಮಾನ್ಯರು ಮಾಸ್ಕ್ ಧರಿಸುವುದು, ಪಾರ್ಟಿಗಳಲ್ಲಿ ಮತ್ತು ಇತರ ಕಾರ್ಯಕ್ರಮಗಳಲ್ಲಿ ಸುರಕ್ಷಿತ ಅಂತರ ಕಾಪಾಡುವುದು ಮುಂತಾದ ಕೋವಿಡ್-19 ಸುರಕ್ಷಾ ಕ್ರಮಗಳನ್ನು ನಿರ್ಲಕ್ಷಿಸುತ್ತಿರುವ ಹಿನ್ನೆಲೆಯಲ್ಲಿ ಕರ್ಫ್ಯೂ ಹೇರಿಕೆ ಅನಿವಾರ್ಯ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿಕೆ ನೀಡಿದ್ದರು.
ದಿಲ್ಲಿಯಲ್ಲಿ ಶುಕ್ರವಾರ 1,09,398 ಕೋವಿಡ್-19 ಮಾದರಿ ತಪಾಸಣೆ ನಡೆಸಲಾಗಿದ್ದು, 8521 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ದಿಲ್ಲಿಯಲ್ಲಿ ಧನಾತ್ಮಕತೆ ದರ ಸುಮಾರು ಶೇ.7.79ರಷ್ಟಿದೆ. ದಿಲ್ಲಿಯಲ್ಲಿ ಧನಾತ್ಮಕತೆ ದರ 0.17% ಇದ್ದುದು ಒಂದು ತಿಂಗಳ ಒಳಗಾಗಿ ಶೇಕಡ 8ನ್ನು ತಲುಪಿದೆ.