ಬೀಡಿ ಗುತ್ತಿಗೆದಾರರ ಕಮಿಷನ್ ಹೆಚ್ಚಳ: ರಾಜ್ಯ ಬೀಡಿ ಮಾಲಕರ ಒಕ್ಕೂಟದ ತೀರ್ಮಾನ
ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ (ದ.ಕ ಅವಿಭಜಿತ) ಜಿಲ್ಲಾ ಬೀಡಿ ಗುತ್ತಿಗೆದಾರರ ಕಮಿಷನ್ ಹೆಚ್ಚಳಕ್ಕೆ ರಾಜ್ಯ ಬೀಡಿ ಮಾಲಕರ ಸಂಘಟನೆಗಳ ಒಕ್ಕೂಟದ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಇತ್ತೀಚೆಗೆ ಮೈಸೂರಿನಲ್ಲಿ ನಡೆದ ರಾಜ್ಯ ಬೀಡಿ ಮಾಲಕರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಜಗನ್ನಾಥ ಶೆಣೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಳೆದ ಎಪ್ರಿಲ್, 2020ರಿಂದ ಮಾರ್ಚ್ 31ರವರೆಗೆ 1000 ಬೀಡಿಗೆ ರೂ.2.25 ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ.
ಇದರೊಂದಿಗೆ ಹಾಲಿ 1000 ಬೀಡಿಗೆ ಕಾಂಟ್ರಾಕ್ಟ್ ದಾರರಿಗೆ ದೊರೆಯುತ್ತಿದ್ದ ಕಮಿಷನ್ ಮೊತ್ತ ಎ.1, 2020ರಿಂದ ಮಾ.31, 2021ರವರೆಗೆ ರೂ.25.25 ಪೈ. ದೊರೆಯಲಿದೆ.(ಈ ಹಿಂದೆ 1000 ಬೀಡಿಗೆ ರೂ.23 ಕಮೀಷನ್ ದೊರೆಯುತ್ತಿತ್ತು). ಕಳೆದ ಎಪ್ರಿಲ್ 2020ರಿಂದ ಮಾರ್ಚ್ 2021 ರವರೆಗಿನ ಬಾಕಿ ಕಮಿಷನ್ ಹಣವನ್ನು ಪಾವತಿಸಲು ಈ ಸಭೆಯಲ್ಲಿ ತೀರ್ಮಾನಿಸಲಾಯಿತು
ರವಿವಾರ ಮೈಸೂರಿನಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ರಾಜ್ಯ ಬೀಡಿ ಕಂಟ್ರಾಕ್ಟ್ ದಾರರ ಸಂಘ, ದ.ಕ.- ಉಡುಪಿ ಬೀಡಿ ಕಾಂಟ್ರಾಕ್ಟ್ ದಾರರ ಸಂಘ, ಜಯ ಕರ್ನಾಟ ಕ ಬೀಡಿ ಕಂಟ್ರಾಕ್ಟದಾರರ ಸಂಘಗಳ ಪ್ರತಿನಿಧಿಗಳಾದ ಕೃಷ್ಣಪ್ಪ ತೊಕ್ಕೊಟ್ಟು, ರವಿ ಉಡುಪಿ, ಗಂಗಾಧರ ಶೆಟ್ಟಿ ಪುತ್ತೂರು, ಖಾದರ್ ಸುರತ್ಕಲ್, ಲಕ್ಷಣ್ ಫರಂಗಿಪೇಟೆ, ರಾಧಾಕೃಷ್ಣ ಶೆಟ್ಟಿ ಸರಪಾಡಿ , ಅರುಣ್ ಕುಮಾರ್ ಉಚ್ಚಿಲ್ ಭಾಗವಹಿಸಿ, ತಮ್ಮ ಮನವಿಗೆ ಸ್ಪಂದಿಸಿದ ರಾಜ್ಯ ಬೀಡಿ ಮಾಲಕರ ಒಕ್ಕೂಟದ ಅಧ್ಯಕ್ಷರಾದ ಜಗನ್ನಾಥ ಶೆಣೈ ಹಾಗು ಎಲ್ಲ ಬೀಡಿ ಮಾಲಕರಿಗೆ ಕೃತಜ್ಞತೆಯನ್ನು ಸಲ್ಲಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.