ಅಕ್ಟೋಬರ್ 28ರಿಂದ ಉಳ್ಳಾಲ ದರ್ಗಾ ಉರೂಸ್
ಉಳ್ಳಾಲ: ಹಝ್ರತ್ ಅಸ್ಸಯ್ಯದ್ ಮುಹಮ್ಮದ್ ಶರೀಫುಲ್ ಮದನಿ ಉಳ್ಳಾಲ ಅವರ ಹೆಸರಿನಲ್ಲಿ ಐದು ವರ್ಷಕೊಮ್ಮೆ ನಡೆಸುವ ಉರೂಸ್ ಕಾರ್ಯಕ್ರಮವು ಅಕ್ಟೋಬರ್ 28 ಆರಂಭಗೊಳ್ಳಲಿದ್ದು, ನವೆಂಬರ್ 20 ವರೆಗೆ ನಡೆಯಲಿದೆ. ಈ ಪ್ರಯುಕ್ತ ಧ್ವಜಾರೋಹಣ ಮೇ 28 ರಂದು ನಡೆಯಲಿದೆ ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಐದು ವರ್ಷಗಳಿಗೊಮ್ಮೆ ನಡೆಯಬೇಕಾಗಿದ್ದ ಐತಿಹಾಸಿಕ ಉಳ್ಳಾಲ ದರ್ಗಾ ಉರೂಸ್ 2020ರಲ್ಲಿ ಆಗಬೇಕಿತ್ತು. ಆದರೆ ಕೊರೊನ ಕಾರಣದಿಂದ ನಡೆಸಲು ಸಾಧ್ಯವಾಗಿಲ್ಲ. ಈ ಬಾರಿ ಕೊರೊನ ಎರಡನೇ ಅಲೆ ಅಡ್ಡಿ ಆದ ಕಾರಣದಿಂದ ಅ.28ರಿಂದ ನಡೆಸಲು ತೀರ್ಮಾನಿಸಿದ್ದೇವೆ. ಉರೂಸ್ ಸಂದರ್ಭದಲ್ಲಿ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮ ನಡೆಯಲಿದೆ ಎಂದು ಅಬ್ದುಲ್ ರಶೀದ್ ಹೇಳಿದರು.
ಉರೂಸ್ ಖರ್ಚು ಜಾಸ್ತಿ ಇರುವುದರಿಂದ ಅನುದಾನ ಬಿಡುಗಡೆ ಕೋರಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅರ್ಜಿ ಸಲ್ಲಿಸಿದ್ದೇವೆ. ಅವರು ಒಂದು ಕೋಟಿ ರೂ. ಮಂಜೂರು ಮಾಡಿದ್ದಾರೆ. ಇನ್ನೂ ಒಂದು ಕೋಟಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದೇವೆ ಎಂದರು.
ಉಪಾಧ್ಯಕ್ಷರಾದ ಯು.ಕೆ. ಮೋನು, ಬಾವಾ ಮಹಮ್ಮದ್, ಕಾರ್ಯದರ್ಶಿ ಮುಹಮ್ಮದ್ ತ್ವಾಹ, ಲೆಕ್ಕಪರಿಶೋದಕ ಯು.ಟಿ. ಇಲ್ಯಾಸ್, ಜೊತೆ ಕಾರ್ಯದರ್ಶಿ ನೌಷದ್ ಅಬೂಬಕ್ಕರ್, ಚಾರಿಟೇಬಲ್ ಉಪಾಧ್ಯಕ್ಷ ಯು.ಕೆ. ಇಬ್ರಾಹಿಂ ಕಕ್ಕೆತೋಟ, ಜೊತೆ ಕಾರ್ಯದರ್ಶಿ ಎ. ಜೆ. ಮೊಯ್ದಿನ್, ಅರೆಬಿಕ್ ಟ್ರಸ್ಟ್ ಉಪಾಧ್ಯಕ್ಷ ಅಬೂಬಕ್ಕರ್, ಸದಸ್ಯರಾದ ಇಬ್ರಾಹಿಂ ಉಳ್ಳಾಲ ಬೈಲ್, ಹಸನಬ್ಬ ಕಡಪ್ಪರ, ಆಲಿಮೋನು ಉಳ್ಳಾಲ, ನಝೀರ್ ಸುಂದರಿಭಾಗ್, ಹಮ್ಮಬ್ವ ಕೋಟೆಪುರ, ಅಹಮ್ಮದ್ ಮುಕ್ಕಚ್ಚೇರಿ, ಮಯ್ಯದ್ದಿ ಕೋಡಿ, ಹಮೀದ್ ಕೋಡಿ ಉಪಸ್ಥಿತರಿದ್ದರು.
ಸದಸ್ಯ ಫಾರೂಕ್ ಉಳ್ಳಾಲ್ ಸ್ವಾಗತಿಸಿದರು. ಕಾರ್ಯದರ್ಶಿ ಮುಹಮ್ಮದ್ ತ್ವಾಹ ವಂದಿಸಿದರು.