ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳ: ವಾರ್ಷಿಕ ಜಾತ್ರೋತ್ಸವಕ್ಕೆ ಚಾಲನೆ
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೋತ್ಸವಕ್ಕೆ ಶನಿವಾರ ಚಾಲನೆ ನೀಡಲಾಯಿತು. ವಾರ್ಷಿಕ ಜಾತ್ರೆಯ ಅಂಗವಾಗಿ ಬೆಳಗ್ಗೆ 10.15ರ ವೃಷಭ ಲಗ್ನದಲ್ಲಿ ದೇವಾಲಯದ ಆಚಾರ್ಯರಾದ ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿಗಳ ಧಾರ್ಮಿಕ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಿತು. ದೇವಾಲಯದ ಪಾರಂಪರಿಕ ಚಾಕರಿದಾರರಾದ ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ್ ರಾವ್ ಮತ್ತು ಪರಿವಾರ ಧ್ವಜಾರೋಹಣ ನೆರವೇರಿಸಿದರು.
ಧ್ವಜಾರೋಹಣದ ಮೊದಲು ಶ್ರೀ ದೇವಾಲಯದ ಸ್ವರ್ಣಲೇಪಿತ ಧ್ವಜಸ್ತಂಭದ ಧ್ವಜಪೀಠಕ್ಕೆ ತಂತ್ರಿಗಳಿಂದ ಪೂಜೆ ನಡೆಯಿತು. ಬಳಿಕ ದೇವರ ಉತ್ಸವ ಮೂರ್ತಿಯು ಹೊರಾಂಗಣಕ್ಕೆ ಬಂದು ಬಲಿ ಉತ್ಸವ ಆರಂಭವಾಯಿತು. ಬಳಿಕ ಜಾತ್ರೋತ್ಸವದ ಧ್ವಜಾರೋಹಣ ನೆರವೇರಿತು.
ಧ್ವಜಾರೋಹಣದ ಹಿನ್ನೆಲೆಯಲ್ಲಿ ಕೊರೋನಾ ಮುನ್ನೆಚರಿಕೆಯನ್ನು ಪಾಲಿಸಲಾಗಿತ್ತು.
ಧ್ವಜಾರೋಹಣದ ಸಂದರ್ಭದಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಸದಸ್ಯರಾದ ರಾಮದಾಸ ಗೌಡ, ಶೇಖರ ನಾರಾವಿ, ರಾಮಚಂದ್ರ ಕಾಮತ್, ಡಾ. ಸುಧಾ ಎಸ್. ರಾವ್, ವೀಣಾ ಬಿ.ಕೆ., ಕೆ.ಎಸ್. ರವೀಂದ್ರನಾಥ ರೈ, ಬಿ. ಐತ್ತಪ್ಪ ನಾಯ್ಕ, ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಪುತ್ತೂರು ನಗರಸಭಾಧ್ಯಕ್ಷ ಕೆ. ಜೀವಂಧರ್ ಜೈನ್, ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್, ಪುತ್ತೂರು ಡಿವೈಎಸ್ಪಿ ಗಾನ ಪಿ. ಕುಮಾರ್, ಚನಿಲ ತಿಮ್ಮಪ್ಪ ಶೆಟ್ಟಿ, ಎನ್.ಕೆ. ಜಗನ್ನಿವಾಸ್ ರಾವ್, ಚಿದಾನಂದ ಬೈಲಾಡಿ, ಮಾಜಿ ಪುರಸಭಾಪತಿ ಯು. ಲೋಕೇಶ್ ಹೆಗ್ಡೆ ಮತ್ತಿತರರು ಪಾಲ್ಗೊಂಡಿದ್ದರು.