ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೈಕ್ರೋಬಯಾಲಜಿ ಸಂಶೋಧನಾ ಪ್ರಯೋಗಾಲಯ ಉದ್ಘಾಟನೆ
ಮಂಗಳೂರು: ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಹೊರಹೊಮ್ಮುವ ಸಂಶೋಧನೆಗಳನ್ನು ಸಕ್ರಿಯಗೊಳಿಸಲು ಮಂಗಳೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ (ಎಸ್ಜೆಇಸಿ) ಮೈಕ್ರೋಬಯಾಲಜಿ ಸಂಶೋಧನಾ ಪ್ರಯೋಗಾಲಯವನ್ನು ಉದ್ಘಾಟಿಸಲಾಯಿತು.
ಮೈಸೂರು ವಿಶ್ವವಿದ್ಯಾಲಯದ ಸೂಕ್ಷ್ಮ ಜೀವವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ. ಶ್ರೀನಿವಾಸ ಎಂ ವೈ ಮತ್ತು ಎನ್ಐಟಿಕೆಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಪ್ರೊ. ಬಾಬು ನಾರಾಯಣ್ ಕೆ, ಕಾಲೇಜಿನ ನಿರ್ದೇಶಕ ವಂ ವಿಲ್ಫ್ರೆಡ್ ಪ್ರಕಾಶ್ ಡಿಸೋಜಾ, ಸಹ ನಿರ್ದೇಶಕರುಗಳಾದ ವಂ ರೋಹಿತ್ ಡಿ'ಕೋಸ್ಟಾ ಮತ್ತು ವಂ ಆಲ್ವಿನ್ ರಿಚರ್ಡ್ ಡಿ'ಸೋಜಾ, ಪ್ರಾಂಶುಪಾಲರಾದ ಡಾ ರಿಯೋ ಡಿ'ಸೋಜಾ, ಮಾನವ ಸಂಪನ್ಮೂಲ ಅಧಿಕಾರಿ ರಾಕೇಶ್ ಲೋಬೊ ಅವರ ಸಮ್ಮುಖದಲ್ಲಿ ಪ್ರಯೋಗಾಲಯವನ್ನು ಉದ್ಘಾಟಿಸಿದರು.
ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ ಯಜ್ಞೇಶ್ವರನ್ ಬಿ ಅವರ ಸ್ವಾಗತ ಭಾಷಣದ ನಂತರ ಕಾರ್ಯಕ್ರಮದ ಸಂಯೋಜಕರಾದ ಡಾ ಭಾಸ್ಕರ್ ಎಸ್ ಅವರು ಅತಿಥಿಯನ್ನು ಪರಿಚಯಿಸುವ ಜೊತೆಗೆ ಬಯೋಲುಮಿನೆಸೆಂಟ್ ಸೂಕ್ಷ್ಮಜೀವಿಗಳನ್ನು ಪ್ರದರ್ಶಿಸಿದರು.
ಪ್ರೊಫೆಸರ್ ಬಾಬು ನಾರಾಯಣ್ ಅವರು ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಕಾಣಸಿಗುವ ಸೂಕ್ಷ್ಮಜೀವಿಗಳ ಬಗ್ಗೆ ಮಾತನಾಡುತ್ತಾ ಅವುಗಳ ಕುರಿತು ಒಳನೋಟಗಳನ್ನು ನೀಡಿದರು.
ಮೈಕ್ರೋಬಯಾಲಜಿ ಕ್ಷೇತ್ರದಲ್ಲಿ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗ ಕೈಗೊಂಡಿರುವ ಉಪಕ್ರಮಗಳನ್ನು ಪ್ರೊ. ಶ್ರೀನಿವಾಸ ಅವರು ಶ್ಲಾಘಿಸಿದರು.
ಡಾ ಭಾಸ್ಕರ್ ಅವರು ಧನ್ಯವಾದಗಳನ್ನು ಅರ್ಪಿಸಿದರು. ರೀನಾ ಜೇಮ್ಸ್ ರೊಡ್ರಿಗಸ್ ಕಾರ್ಯಕ್ರಮವನ್ನು ನಿರೂಪಿಸಿದರು.