ಬಟ್ಟೆ, ಪೇಪರ್ ಚೀಲ ತಯಾರಿಕೆ ತರಬೇತಿ ಶಿಬಿರ ಸಮಾರೋಪ
ಉಡುಪಿ, ಎ.10: ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಮತ್ತು ಕೆನರಾ ಬ್ಯಾಂಕ್ ವಲಯ ಕಚೇರಿ ಮಣಿಪಾಲ ಇವುಗಳ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ಬಟ್ಟೆ ಮತ್ತು ಪೇಪರ್ ಚೀಲ ತಯಾರಿಕೆ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಇತ್ತೀಚೆಗೆ ಮಣಿಪಾಲದ ಶಿವಳ್ಳಿಯಲ್ಲಿರುವ ಭಾರತೀಯ ವಿಕಾಸ ಟ್ರಸ್ಟ್ನಲ್ಲಿ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಣಿಪಾಲ ಕೆನರಾ ಬ್ಯಾಂಕ್ ವಲಯ ಕಚೇರಿಯ ಹಿರಿಯ ವ್ಯವಸ್ಥಾಪಕರಾದ ಪ್ರಭಾ ಎಚ್.ಎಸ್. ಮಾತನಾಡಿ ವಿರ್ದ್ಯಾಜನೆಗೆ ವಯಸ್ಸು, ಆರ್ಥಿಕ ಸ್ಥಿತಿ ಇವುಗಳಿಗಿಂತ ಮನೋಧರ್ಮವೇ ಮುಖ್ಯವಾಗುತ್ತದೆ. ಇಲ್ಲಿ ಕಲಿತ ಕೌಶಲ್ಯವನ್ನು ಬಳಸಿಕೊಂಡು ಸ್ವ ಉದ್ಯೋಗಿಗಳಾಗಿ ಯಶಸ್ಸು ಪಡೆಯುವಂತೆ ಶಿಬಿರಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಭಾರತೀಯ ವಿಕಾಸ ಟ್ರಸ್ಟ್ನ ಹಿರಿಯ ತರಬೇತುದಾರ ಸುಧೀರ್ ಕುಲಕರ್ಣಿ ಮಾತನಾಡಿ, ಭಾರತೀಯ ವಿಕಾಸ ಟ್ರಸ್ಟ್ ಸ್ವ-ಉದ್ಯೋಗಿಗಳಿಗೆ ತರಬೇತಿಯ ನಂತರ ಸ್ವ-ಉದ್ಯೋಗ ಕೈಗೊಳ್ಳಲು ಸಹಾಯವಾಗುವ ಅನೇಕ ಮಾರ್ಗದರ್ಶಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ಶಿಬಿರಾರ್ಥಿಗಳು ಇದರ ಪ್ರಯೋಜ ಪಡೆದುಕೊಳ್ಳಬಹುದು ಎಂದರು.
ಬಿವಿಟಿಯ ಮುಖ್ಯ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀಬಾಯಿ ಮತ್ತು ಸಂಪನ್ಮೂಲ ವ್ಯಕ್ತಿ ಮುಕ್ತಾ ಶ್ರೀನಿವಾಸ ಭಟ್ ಉಪಸ್ಥಿತರಿದ್ದರು. ಭಾರತೀಯ ವಿಕಾಸ ಟ್ರಸ್ಟ್ನ ಹಿರಿಯ ಸಲಹೆಗಾರ ಶ್ರೀಕಾಂತ್ ಹೊಳ್ಳ ಸ್ವಾಗತಿಸಿ ಕಾರ್ಯಕ್ರಮ ಅಧಿಕಾರಿ ಪ್ರತಿಮಾ ವಂದಿಸಿದರು.