ಬ್ಯಾರಿ ಜಾನಪದ ಕಲೆಗಳ ಸರ್ಟಿಫಿಕೇಟ್ ಕೋರ್ಸ್ ತರಬೇತಿಗೆ ಚಾಲನೆ
ಮಂಗಳೂರು, ಎ.10: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ನಗರದ ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ) ಇದರ ಸಹಕಾರದಲ್ಲಿ ‘ಬ್ಯಾರಿ ದಫ್, ಕೋಲ್ಕಲಿ, ಒಪ್ಪನೆ ಪಾಟ್ಜಾನಪದ ಕಲೆಗಳ ಸರ್ಟಿಫಿಕೇಟ್ ಕೋರ್ಸ್ ತರಬೇತಿಗೆ ಶನಿವಾರ ಕಾಲೇಜಿನ ಮಾಫೇಯಿ ಸೆಂಟರ್ ಎರಿಕ್ ಮಥಾಯಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು
ಕಾಲೇಜಿನ ಪ್ರಾಂಶುಪಾಲ ರೆ.ಡಾ.ಪ್ರವೀಣ್ ಮಾರ್ಟಿಸ್ ಎಸ್.ಜೆ. ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಬ್ಯಾರಿ ಸಾಹಿತ್ಯ ಅಕಾಡಮಿಯು ಸಕ್ರಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ನಾವು ಉತ್ತಮವಾಗಿ ಕೆಲಸವನ್ನು ಮಾಡಿದರೆ ಅದಕ್ಕಿಂತ ದೊಡ್ಡ ತೃಪ್ತಿ ಯಾವುದೂ ಇಲ್ಲ. ದಿನದಿಂದ ದಿನಕ್ಕೆ ಎಲ್ಲಾ ಸಮುದಾಯಕ್ಕೆ ಪೂರಕವಾದ ಉತ್ತಮ ಕೆಲಸ ಮಾಡುತ್ತಿದೆ. ಹೀಗಾಗಿ ನಮಗೆ ಬ್ಯಾರಿ ಅಕಾಡಮಿಯ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದರು.
ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಬ್ಯಾರಿ ಅಧ್ಯಯನ ಪೀಠದ ಸದಸ್ಯ ಅಹ್ಮದ್ ಬಾವಾ ಪಡೀಲ್, ಕಾರ್ನಾಡ್ ಮುಲ್ಕಿಯ ದಫ್ ಉಸ್ತಾದ್ ಕೆ.ಎಚ್. ನೂರ್ಮಹಮ್ಮದ್, ಬ್ಯಾರಿ ಸಂಗೀತ ಕಲಾವಿದರ ಒಕ್ಕೂಟದ ಉಪಾಧ್ಯಕ್ಷ ಸರ್ಫರಾಝ್ ಭಾಗವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ರಹೀಸ್ ಟಿ.ಕಣ್ಣೂರು ಭಾಗವಹಿಸಿದ್ದರು. ಅಕಾಡಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಕಾರ್ಯಕ್ರಮದ ಸದಸ್ಯ ಸಂಚಾಲಕ ಶಂಶೀರ್ ಬುಡೋಳಿ, ಸಂಯೋಜಕಿ ಪ್ರೊ.ಕ್ಯಾಸ್ತಲಿನೊ, ವಿದ್ಯಾರ್ಥಿ ಸಂಯೋಜಕ ಚೆಲ್ಸಿಯಾ ಡಿಸೋಜ, ಅಕಾಡೆಮಿಯ ಮಾಜಿ ಸದಸ್ಯ ಹುಸೇನ್ ಕಾಟಿಪಳ್ಳ ಉಪಸ್ಥಿತರಿದ್ದರು. ವಿಲ್ಸನ್ ಡಿಸೋಜ ವಂದಿಸಿದರು. ಶರಲ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.