ಮಹಾರಾಷ್ಟ್ರದಲ್ಲಿ ಸಂಪೂರ್ಣ ಲಾಕ್ ಡೌನ್ ಗೆ ಸಿಎಂ ಉದ್ಧವ್ ಠಾಕ್ರೆ ಒಲವು
ಮುಂಬೈ: ಭಾರೀ ಪ್ರಮಾಣದ ಕೋವಿಡ್ ಕೇಸ್ ಗಳು ದಾಖಲಾಗುತ್ತಿರುವ ಕಾರಣ ಪರದಾಟ ನಡೆಸುತ್ತಿರುವ ಮಹಾರಾಷ್ಟ್ರ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ವಿಧಿಸುವ ಕುರಿತಂತೆ ಸರ್ವಪಕ್ಷ ಸಭೆಯಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಒಲವು ತೋರಿದ್ದಾರೆ ಎಂದು ಮೂಲಗಳು NDTVಗೆ ತಿಳಿಸಿವೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿಯ ಕುರಿತು ಚರ್ಚಿಸಲು ವಿಪಕ್ಷ ನಾಯಕ ದೇವೇಂದ್ರ ಫಡ್ನವಿಸ್ ಹಾಗೂ ತನ್ನ ಸಂಪುಟ ಸಚಿವರೊಂದಿಗೆ ವೀಡಿಯೊ ಕಾನ್ಪರೆನ್ಸ್ ಮೂಲಕ ಶನಿವಾರ ಸಭೆ ನಡೆಸಿದರು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿಯ ಕಚೇರಿ ತಿಳಿಸಿದೆ.
ಕೆಲವು ದಿನಗಳ ಕಾಲ ಲಾಕ್ ಡೌನ್ ಅಗತ್ಯವಿದೆ. ನಂತರ ನಿರ್ಬಂಧವನ್ನು ಸಡಿಸಲಾಗುವುದು. ಮುಖ್ಯಮಂತ್ರಿಗಳು ರವಿವಾರ ರಾಜ್ಯ ಕೋವಿಡ್ ಕಾರ್ಯಪಡೆಯೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಸುದ್ದಿಸಂಸ್ಥೆ ಎಎನ್ ಐಗೆ ತಿಳಿಸಿದ್ದಾರೆ.
ನೀವು ಲಾಕ್ ಡೌನ್ ಹೇರಿದರೆ ಜನರು ಆಕ್ರೋಶಗೊಳ್ಳುತ್ತಾರೆ. ಹಲವು ವ್ಯವಹಾರಗಳು ಸ್ತಬ್ದವಾಗುತ್ತವೆ. ಈ ಕುರಿತು ಯೋಚಿಸಿ ನಿರ್ಧರಿಸಿ ಎಂದು ಮಾಜಿ ಮುಖ್ಯಮಂತ್ರಿ ಫಡ್ನವಿಸ್ ಸಲಹೆ ನೀಡಿದರು.
ಬಿಜೆಪಿ ಲಾಕ್ ಡೌನ್ ಗೆ ವಿರೋಧಿಸುವುದಿಲ್ಲ. ಆದರೆ ಅದಕ್ಕೂ ಮೊದಲು ಸರಿಯಾದ ಯೋಜನೆ ರೂಪಿಸಿ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ತಿಳಿಸಿದ್ದಾರೆ.