ಅಂತರ ನಿಗಮ ವರ್ಗಾವಣೆ ಕೋರಿಕೆ ಪರಿಗಣಿಸದಿರಲು ನಿರ್ಧಾರ: ಕೆಎಸ್ಸಾರ್ಟಿಸಿ
ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ
ಬೆಂಗಳೂರು, ಎ.11: ಮುಷ್ಕರದಲ್ಲಿ ಭಾಗಿಯಾಗಿ ಸಾರ್ವಜನಿಕರಿಗೆ ಸಾರಿಗೆ ಸೇವೆ ಒದಗಿಸುವಲ್ಲಿ ತೊಂದರೆ ಮಾಡುತ್ತಿರುವ ನೌಕರರ ‘ಅಂತರ ನಿಗಮ ವರ್ಗಾವಣೆ’ ಕೋರಿಕೆಯನ್ನು ಪರಿಗಣಿಸದಿರಲು ತೀರ್ಮಾನಿಸಲಾಗಿದೆ. ಅದೇರೀತಿ ಕೋರಿಕೆ ಮೇರೆಗೆ ಅಂತರ ವಿಭಾಗ ವರ್ಗಾವಣೆಗೊಂಡವರ ಆದೇಶವನ್ನು ರದ್ದುಗೊಳಿಸಿ ಮೂಲ ವಿಭಾಗಕ್ಕೆ ಮರು ವರ್ಗಾವಣೆ ಮಾಡಲಾಗುವುದು ಎಂದು ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.
ಮುಷ್ಕರಕ್ಕೆ ಪ್ರಚೋದನೆ ನೀಡಿ, ಕರ್ತವ್ಯ ನಿರ್ವಹಿಸುತ್ತಿರುವ ಸಹ ಸಿಬ್ಬಂದಿಗೆ ಬೆದರಿಕೆ ಹಾಕಿ, ಬಸ್ಸುಗಳ ಕಾರ್ಯಾಚರಣೆಗೆ ಅಡ್ಡಿಪಡಿಸಿ, ಸಾರ್ವಜನಿಕರಿಗೆ ಸಾರಿಗೆ ಸೇವೆ ಒದಗಿಸುವಲ್ಲಿ ತೊಂದರೆ ಮಾಡುತ್ತಿರುವ ನೌಕರರ ‘ಅಂತರ ನಿಗಮ ವರ್ಗಾವಣೆ’ ಕೋರಿಕೆಯನ್ನು ಪರಿಗಣಿಸದಿರಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ಕೋರಿಕೆ ಮೇರೆಗೆ ಅಂತರ ವಿಭಾಗ ವರ್ಗಾವಣೆಗೊಂಡು, ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಈ ಅವಧಿಯಲ್ಲಿ ಕೂಡಲೇ ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಈ ಸಂಬಂಧ ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಿ,ಮೂಲ ವಿಭಾಗಕ್ಕೆ ಮರು ವರ್ಗಾವಣೆ ಮಾಡಲಾಗುವುದು ಎಂದವರು ತಿಳಿಸಿದ್ದಾರೆ.