ಕೊರೋನ ಕಾಟದ ನಡುವೆ ಬಂಗಾಳದಲ್ಲಿ 8 ಹಂತಗಳ ಮತದಾನ: ಚು.ಆಯೋಗದ ವಿರುದ್ಧ ಮೊಯಿತ್ರಾ ವಾಗ್ದಾಳಿ
ಕೋಲ್ಕತಾ: ಕೋವಿಡ್ -19 ಸಾಂಕ್ರಾಮಿಕದ ಮಧ್ಯೆ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯನ್ನು ಎಂಟು ಹಂತಗಳಲ್ಲಿ ನಡೆಸುವ ನಿರ್ಧಾರವು "ನರಹತ್ಯೆಯ ಅಂಚಿನಲ್ಲಿರುವ ಕ್ರಿಮಿನಲ್ ನಿರ್ಲಕ್ಷ್ಯ" ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಕ್ತಾರೆ ಮಾಹುವಾ ಮೊಯಿತ್ರಾ ಗುರುವಾರ ಚುನಾವಣಾ ಆಯೋಗದ (ಇಸಿ) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
"ಭೀಕರ ಸಾಂಕ್ರಾಮಿಕ ರೋಗದ ಮಧ್ಯೆ ಪಶ್ಚಿಮಬಂಗಾಳದಲ್ಲಿ 8 ಹಂತದ ಚುನಾವಣೆಯನ್ನು ಕಡ್ಡಾಯಗೊಳಿಸುವುದು ನರಹತ್ಯೆಯ ಗಡಿಯಲ್ಲಿರುವ ಕ್ರಿಮಿನಲ್ ನಿರ್ಲಕ್ಷ್ಯವಾಗಿದೆ. ನಮ್ಮನ್ನು ಇದರಲ್ಲಿ ಸಿಲುಕಿಸುತ್ತಿರುವುದನ್ನು ನಂಬಲಾಗುತ್ತಿಲ್ಲ. ಸೋಂಕುಗಳು, ಸಾವುಗಳು ಪ್ರತಿದಿನ ಹೆಚ್ಚುತ್ತಿವೆ" ಎಂದು ಮೊಯಿತ್ರಾ ತನ್ನ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿದ್ದಾರೆ.
ಪಶ್ಚಿಮ ಬಂಗಾಳ ಚುನಾವಣೆಯ ಐದನೇ ಹಂತದ ಮತದಾನವು ಎಪ್ರಿಲ್ 17 ರಂದು ನಡೆಯಲಿದೆ. ಈ ಹಿಂದಿನ ನಾಲ್ಕು ಹಂತದ ಚುನಾವಣೆಗಳು ಕ್ರಮವಾಗಿ ಮಾರ್ಚ್ 27, ಎಪ್ರಿಲ್ 1, ಎಪ್ರಿಲ್ 6 ಮತ್ತು ಎಪ್ರಿಲ್ 10 ರಂದು ನಡೆದಿವೆ.
ಭಾರತವು ಮಾರಣಾಂತಿಕ ಕೋವಿಡ್ -19 ಸಾಂಕ್ರಾಮಿಕದ ಎರಡನೇ ಅಲೆಯನ್ನು ಎದುರಿಸುತ್ತಿದೆ. ಎರಡು ದಿನಗಳ ಹಿಂದೆ ಕೋವಿಡ್ -19 ಸೋಂಕಿಗೆ ತುತ್ತಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ರೆಝಾವುಲ್ ಹಕ್ ಗುರುವಾರ ಕೋಲ್ಕತ್ತಾದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇಂತಹ ಪರಿಸ್ಥಿತಿಯನ್ನು ಗಮನಿಸುವಂತೆ ಚುನಾವಣಾ ಆಯೋಗಕ್ಕೆ ಮೊಯಿತ್ರಾ ಮನವಿ ಮಾಡಿದರು.