ಮಮತಾ ಬ್ಯಾನರ್ಜಿ ಸ್ಪರ್ಧಿಸಿದ್ದ ನಂದಿಗ್ರಾಮದ ಫಲಿತಾಂಶದ ಬಗ್ಗೆ ಗೊಂದಲ: ಸುವೇಂದು ಅಧಿಕಾರಿ ವಿಜಯಿ ?
ಹೊಸದಿಲ್ಲಿ: ನಂದಿಗ್ರಾಮ ವಿಧಾನಸಭಾ ಫಲಿತಾಂಶದ ಬಗ್ಗೆ ಹುಟ್ಟಿಕೊಂಡಿರುವ ಗೊಂದಲ ಇದೀಗ ವಿವಾದವನ್ನು ಸೃಷ್ಟಿಸಿದೆ. ಇಂದು ಸಂಜೆ 4:30ರ ಸುಮಾರಿಗೆ ಬಹುತೇಕ ರಾಷ್ಟ್ರೀಯ ಮಾಧ್ಯಮಗಳು ನಂದಿಗ್ರಾಮದಲ್ಲಿ ಮಮತಾ ಸುವೆಂದು ಅಧಿಕಾರಿಯನ್ನು 1200 ಮತಗಳಿಂದ ಎಂದು ವರದಿ ಮಾಡಿದ್ದವು. ಆದರೆ ಇದೀಗ ಚುನಾವಣಾ ಆಯೋಗ ಬಿಜೆಪಿಯ ಸುವೆಂದು ಅಧಿಕಾರಿ ಮಮತಾರನ್ನು 1957 ಮತಗಳಿಂದ ಮಣಿಸಿದ್ದಾರೆ ಎಂದು ಹೇಳಿದ್ದಾಗಿ ವರದಿಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ ನಂದಿಗ್ರಾಮದ ಜನರ ತೀರ್ಪನ್ನು ಒಪ್ಪಿಕೊಳ್ಳುವುದಾಗಿ ಹೇಳಿದ್ದು, ಚುನಾವಣಾ ಆಯೋಗದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಹೇಳಿದ್ದಾರೆ ಎಂದು indiatoday.in ವರದಿ ಮಾಡಿದೆ.
ಈ ಬಗ್ಗೆ ಮಾತನಾಡಿರುವ ಮಮತಾ ಬ್ಯಾನರ್ಜಿ, “ನಂದಿಗ್ರಾಮದ ಬಗ್ಗೆ ಚಿಂತಿಸಬೇಡಿ. ಹೋರಾಟಗಳನ್ನು ನಡೆಸುವಾಗ ಏನನ್ನಾದರೂ ತ್ಯಾಗ ಮಾಡಬೇಕಾಗುತ್ತದೆ. ನಾನು ನಂದಿಗ್ರಾಮಕ್ಕಾಗಿ ಹೋರಾಟ ನಡೆಸಿದೆ. ನಂದಿಗ್ರಾಮದ ಜನರು ಅವರ ತೀರ್ಪನ್ನು ನೀಡಿದ್ದಾರೆ. ನಾನದನ್ನು ಸ್ವೀಕರಿಸಿದ್ದೇನೆ” ಎಂದಿದ್ದಾರೆ.
ಈ ದಿಢೀರ್ ಬೆಳವಣಿಗೆಯ ಬಗ್ಗೆ ಗೊಂದಲ ಸೃಷ್ಟಿಯಾಗಿದ್ದು , ಆಯೋಗದ ನಡೆಯ ಬಗ್ಗೆ ನೆಟ್ಟಿಗರು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.