ತೇಜಸ್ವಿ ಸೂರ್ಯ ಬಗ್ಗೆ ಝಮೀರ್ ಅಹ್ಮದ್ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಲಿ: ಯಡಿಯೂರಪ್ಪ
ಬೆಂಗಳೂರು, ಮೇ 7: ಸಂಸದ ತೇಜಸ್ವಿ ಸೂರ್ಯ ಬಹಳ ಕಷ್ಟಪಟ್ಟು, ರಿಸ್ಕ್ ತೆಗೆದುಕೊಂಡು ಕೋವಿಡ್ ಬೆಡ್ ಬ್ಲಾಕಿಂಗ್ ಅವ್ಯವಹಾರವನ್ನು ಸರಕಾರದ ಗಮನಕ್ಕೆ ತಂದಿದ್ದಾರೆ. ಇದಕ್ಕಾಗಿ ಸರಕಾರದ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ತೇಜಸ್ವಿ ಸೂರ್ಯ ಬಗ್ಗೆ ಝಮೀರ್ ಅಹ್ಮದ್ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ.
ಅವರು ಇಂದು ನಗರದ ಅಣ್ಣಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು.
ವಾಸ್ತವಿಕ ಸತ್ಯ ಸಂಗತಿಯನ್ನು ತೇಜಸ್ವಿ ಸೂರ್ಯ ಬಯಲಿಗೆಳೆದಿದ್ದಾರೆ. ಆದರೆ ಇದು ಅಪರಾಧ ಅಂತ ಝಮೀರ್ ಅಹ್ಮದ್ ರಿಗೆ ಅಪರಾಧವಾಗಿ ಕಂಡಿದೆ ಎಂದು ಟೀಕಿಸಿದ ಸಿಎಂ, ಇನ್ನಾದರೂ ಅವರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಝಮೀರ್ ಅಹ್ಮದ್ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಬೆಡ್ ಬ್ಲಾಕಿಂಗ್ ಅವ್ಯವಹಾರದ ಬಗ್ಗೆ ತೇಜಸ್ವಿ ಸೂರ್ಯ ಜೊತೆ ಚರ್ಚಿಸಿದ್ದೇನೆ. ಈ ರೀತಿಯ ಅವ್ಯವಹಾರ ತಡೆಗಟ್ಟಲು ಬಿಗಿಯಾದ ಕ್ರಮ ಕೈಗೊಂಡಿದ್ದೇನೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.