"ಬಿಜೆಪಿ ನಾಯಕರು ಕೋವಿಡ್ ಹರಡುತ್ತಿದ್ದಾರೆ, ಬಂಗಾಳಕ್ಕೆ ಬರುವ ಮುಂಚೆ ಅವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ"
ಮಮತಾ ಬ್ಯಾನರ್ಜಿ ಆದೇಶ
ಕೋಲ್ಕತ್ತ: ಬಿಜೆಪಿ ಮುಖಂಡರು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡುವುದಾದರೆ ಅವರು ಕೋವಿಡ್ ನೆಗೆಟಿವ್ ವರದಿಯನ್ನು ಹೊಂದಿರುವುದು ಕಡ್ಡಾಯ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ. ಬಿಜೆಪಿ ನಾಯಕರು ರಾಜಯ್ಕ್ಕೆ ಆಗಮಿಸಿ ಸಾಂಕ್ರಾಮಿಕವನ್ನೂ ಇನ್ನಷ್ಟು ಪರಿಣಾಮಕಾರಿಯಾಗಿ ಹರಡುತ್ತಿದ್ದಾರೆ ಎಂದು ಅವರು ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, "ಒಂದು ವೇಳೆ ಸಚಿವರು ಯಾರಾದರೂ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡುವುದಾದರೆ ಅವರು ಕೋವಿಡ್ ನೆಗೆಟಿವ್ ವರದಿಗಳನ್ನು ಹೊಂದಿರುವುದು ಕಡ್ಡಾಯವಾಗಿದೆ. ಅವರು ವಿಶೇಷ ವಿಮಾನದಲ್ಲಿ ಆಗಮಿಸುವುದಾದರೂ ಸರಿಯೇ. ಎಲ್ಲರಿಗೂ ನ್ಯಾಯ ಸಮಾನವಾಗಿರುತ್ತದೆ. ಬಿಜೆಪಿ ನಾಯಕರು ಪದೇ ಪದೇ ರಾಜ್ಯಕ್ಕೆ ಭೇಟಿ ನೀಡುತ್ತಿರುವುದರಿಂದ ಕೋವಿಡ್ ಹೆಚ್ಚಳವಾಗುತ್ತಿದೆ" ಎಂದು ಅವರು ಹೇಳಿದರು.
ಚುನಾವಣೋತ್ತರ ಹಿಂಸಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ವಿ ಮುರಳೀಧರನ್ ಪದೇ ಪದೇ ರಾಜ್ಯಕ್ಕೆ ಆಗಮಿಸುತ್ತಿರುವುದರ ಕುರಿತು ಅವರನ್ನುದ್ದೇಶಿಸಿ ಮಮತಾ ಬ್ಯಾನರ್ಜಿ ಮಾತನಾಡಿದ್ದಾರೆ.