ಸುಳ್ಯ : ಬಂದೂಕು ತಯಾರಿಕಾ ಘಟಕಕ್ಕೆ ಪೊಲೀಸರ ದಾಳಿ ; ದಿವಾಕರ ಆಚಾರ್ಯ ಸಹಿತ ನಾಲ್ವರ ಸೆರೆ
ಪೊಲೀಸರು ವಶಕ್ಕೆ ಪಡೆದುಕೊಂಡ ಬಂದೂಕು
ಸುಳ್ಯ: ತಾಲೂಕಿನ ನಾಲ್ಕೂರು ಗ್ರಾಮದ ಚತ್ರಪ್ಪಾಡಿ ಎಂಬಲ್ಲಿ ನಾಡಕೋವಿ ತಯಾರಿಕೆ ಮಾಡುತ್ತಿದ್ದ ವ್ಯಕ್ತಿ ಹಾಗು ಅದನ್ನು ಪಡೆದವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸರ್ಕಲ್ ಇನ್ಸ್ ಪೆಕ್ಟರ್ ನವೀನ್ ಚಂದ್ರಜೋಗಿ ಮತ್ತು ಸುಬ್ರಹ್ಮಣ್ಯ ಎಸ್ ಐ ಓಮನ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಕೋವಿ ತಾಯಾರಕ ಚತ್ರಪ್ಪಾಡಿಯ ದಿವಾಕರ ಆಚಾರ್ಯ ಎಂಬಾತನನ್ನು ಬಂಧಿಸಿದ್ದಾರೆ.
ದಿವಾಕರ ಆಚಾರ್ಯ ಪರವಾನಿಗೆ ಇಲ್ಲದೇ ಅಕ್ರಮವಾಗಿ ಬಂದೂಕು ತಯಾರಿಸಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದ್ದು, ಆರೋಪಿಯ ಮನೆಯ ಬಳಿ ಇರುವ ಕಬ್ಬಿಣದ ಕೆಲಸ ಮಾಡುವ ಘಟಕಕ್ಕೆ ದಾಳಿ ಮಾಡಿದ ಪೊಲೀಸರು ಆರೋಪಿಯ ಬಳಿ ಇದ್ದ ಒಂದು ಬಂದೂಕು ಮತ್ತು ಒಂದು ಸಜೀವ ಗುಂಡನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ತನಿಖೆ ವೇಳೆ ಆರೋಪಿ ಇತರ ಮೂವರ ಹೆಸರನ್ನು ಹೇಳಿದ್ದು, ಅದರ ಆಧಾರದಲ್ಲಿ ಸುಬ್ರಹ್ಮಣ್ಯ ನೂಚಿಲದ ಕಾರ್ತಿಕ್, ಬಿಳಿನೆಲೆಯ ಚಿದ್ಗಲ್ ಮನೆಯ ಅಶೋಕ್ , ಹಾಸನದ ಚಂದನ್ ಎಂಬವರನ್ನು ಬಂಧಿಸಿರುವುದಾಗಿ ವರದಿಯಾಗಿದೆ.
ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.