ಆಮ್ಲಜನಕ ಕೊರತೆಯಿಂದಾಗಿ 75 ರೋಗಿಗಳ ಸಾವು: ಗೋವಾ ಬಿಜೆಪಿಯಿಂದ ಕೋರ್ ಸಮಿತಿ ಸಭೆ
ಪಣಜಿ: ರಾಜ್ಯದ ಅತಿದೊಡ್ಡ ಕೋವಿಡ್ ವ್ಯವಸ್ಥೆ ಇರುವ ಆಸ್ಪತ್ರೆಯಲ್ಲಿ ಆಮ್ಲಜನಕದ ಪೂರೈಕೆಯ ಕೊರತೆಯಿಂದಾಗಿ ಕಳೆದ ಕೆಲವೇ ದಿನಗಳಲ್ಲಿ 75 ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾದ ಒಂದು ದಿನದ ನಂತರ ಗೋವಾದ ಬಿಜೆಪಿ ಇಂದು ತುರ್ತು ಕೋರ್ ಸಮಿತಿ ಸಭೆ ನಡೆಸಿತು.
ಎಲ್ಲಾ 75 ಸಾವುಗಳು ಗೋವಾ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ನಡೆದಿವೆ ಎಂದು ಮಾಜಿ ಉಪಮುಖ್ಯಮಂತ್ರಿ ವಿಜಯ್ ಸರ್ದೇಸಾಯಿ ಆರೋಪಿಸಿದ್ದರು.
ಎಲ್ಲಾ ಹಿರಿಯ ಬಿಜೆಪಿ ನಾಯಕರು ಇಂದಿನ ಸಭೆಯಲ್ಲಿ ಪಾಲ್ಗೊಂಡು ಸಾವಿನ ಬಗ್ಗೆ ಹಾಗೂ ಅಂತಹ ಸಾವುನೋವುಗಳನ್ನು ತಡೆಯಲು ಏನು ಮಾಡಬೇಕು ಎಂದು ಚರ್ಚಿಸಲಾಗಿದೆ ಎಂದು ಪಕ್ಷದ ಮುಖಂಡರು ಇಂದು ಹೇಳಿದರು.
"ಪ್ರಕರಣಗಳ ಸಂಖ್ಯೆ ಬಹಳ ವೇಗವಾಗಿ ಏರಿತು. ನಾವು ಆಮ್ಲಜನಕ ಮತ್ತು ಹಾಸಿಗೆಗಳ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಈಗ ಏನು ಮಾಡಬೇಕೆಂಬುದರತ್ತ ಗಮನ ಹರಿಸಲಾಗಿದೆ" ಎಂದು ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯಕ್ ಹೇಳಿದರು.
ರಾಜ್ಯ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಹಾಗೂ ಸಿಎಂ ಪ್ರಮೋದ್ ಸಾವಂತ್ ನಡುವಿನ ತೀವ್ರ ಭಿನ್ನಾಭಿಪ್ರಾಯ ಬಗೆಹರಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಧ್ಯಪ್ರವೇಶಿಸಿದ ಕುರಿತಾಗಿ ಪ್ರಶ್ನಿಸಿದಾಗ ಅವರು "ಆ ವಿಷಯ ಈಗ ಮುಗಿದಿದೆ" ಎಂದು ಹೇಳಿದರು.