ಉಳ್ಳಾಲ : ಪ್ರಾಕೃತಿಕ ವಿಕೋಪ ಸಭೆ
ಉಳ್ಳಾಲ : ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಗೆ ಉಳ್ಳಾಲದಲ್ಲಿ ಕಡಲಿನಬ್ಬರ ತೀವ್ರಗೊಂಡು ಕೆಲವು ಕಡೆ ಹಾನಿ ಸಂಭವಿಸಿದ ಹಿನ್ನೆಲೆಯಲ್ಲಿ ನಗರ ಸಭಾ ಕಚೇರಿಯಲ್ಲಿ ಶಾಸಕ ಖಾದರ್ ಅವರ ಅಧ್ಯಕ್ಷತೆಯಲ್ಲಿ ಪ್ರಾಕೃತಿಕ ವಿಕೋಪ ಸಭೆ ಶನಿವಾರ ನಡೆಯಿತು.
ಸಭೆಯಲ್ಲಿ ಪೌರಾಯುಕ್ತ ರಾಯಪ್ಪ ರವರು ಗಾಳಿ ಮಳೆಗೆ ಆಗಿರುವ ಹಾನಿಯ ಪಟ್ಟಿ ಪ್ರಕಟಿಸಿ ತೊಂದರೆ ಗೊಳಗಾದವರಿಗೆ ಊಟ ಸಹಿತ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭ ಖಾದರ್ ಮಾತನಾಡಿ, ಚಂಡಮಾರುತ ಯಾರ ಕೈಯಲ್ಲಿ ಇಲ್ಲ .ಈ ಸಮಸ್ಯೆ ಬಂದಾಗ ರಕ್ಷಣೆ ಹೇಗೆ ಎಂದು ಯೋಚಿಸಬೇಕು. ಸಸಿಹಿತ್ಲು ಮರವಂತೆ ಅಪಾಯ ಆಗಿದೆ. ಜಾಸ್ತಿ ಅಪಾಯ ದಂಚಿನಲ್ಲಿರುವುದು ಉಳ್ಳಾಲ. ಹಾನಿಯಾದ ಮನೆಗೆ ಶೀಘ್ರ ಪರಿಹಾರ ಆಗಬೇಕು. ಜತೆಗೆ ಪುನರ್ ವ್ಯವಸ್ಥೆ ಮಾಡಿಕೊಡಬೇಕು. ಮನೆ ಕಳೆದುಕೊಂಡವರಿಗೆ ನೆತ್ತಿಲಪದವು, ಕೊಣಾಜೆ ಪರಿಸರದಲ್ಲಿ ಮೂರು ಸೆನ್ಸ್ ಜಾಗ ನೀಡಿ ಮನೆ ನಿರ್ಮಾಣ ಕಾರ್ಯಕ್ಕೆ ಅವಕಾಶ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ವಾಣಿ ಅವರು ರೋಹಿದಾಸ್, ಮೋಹನ್ ಹಾಗೂ ಯೋಗೀಶ್ ಅವರ ಮನೆಗಳು ಸೋಮೇಶ್ವರ ದಲ್ಲಿ ಜಲಾವೃತ ಆಗಿದೆ. ರುದ್ರ ಭೂಮಿ ಸಂಪೂರ್ಣ ಸಮುದ್ರ ಮಡಿಲು ಸೇರಿದೆ. ತೊಂದರೆ ಗೊಳಗಾದ 60 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ತಹಶೀಲ್ದಾರ್ ಗುರುಪ್ರಸಾದ್ ರವರು ಮಾತನಾಡಿ, ತೊಂದರೆಗೊಳಗಾದ ಕುಟುಂಬ ಗಳಿಗೆ ವ್ಯವಸ್ಥೆ ಮಾಡಲಾಗುವುದು. ಚಂಡಮಾರುತ ತೀವ್ರತೆ ಪಡೆಯುವ ಸಾಧ್ಯತೆ ಇರುವುದರಿಂದ ಕಡಲತೀರದಲ್ಲಿ ವಾಸವಿರುವ ಕುಟುಂಬ ಸಂಬಂಧಿಕರ ಮನೆಗೆ ಹೋಗಬೇಕು. ಗಂಜಿ ಕೇಂದ್ರ ಯಾರು ಇಷ್ಟ ಪಡುವುದಿಲ್ಲ. ಗಂಜಿ ಕೇಂದ್ರಕ್ಕೆ ಹೋಗಲು ತೊಂದರೆ ಗೊಳಗಾದ ಕುಟುಂಬ ಒಪ್ಪುವುದಿಲ್ಲ. ತುರ್ತು ಸಂದರ್ಭದಲ್ಲಿ ಎಲ್ಲದಕ್ಕೂ ತಯಾರಿ ಇರಬೇಕು. ಪರಿಹಾರ ಸಹಿತ ಎಲ್ಲಾ ಸೌಕರ್ಯಗಳನ್ನು ತೊಂದರೆ ಗೊಳಗಾದ ಕುಟುಂಬ ಕ್ಕೆ ಸರ್ಕಾರ ನೀಡುತ್ತದೆ ಎಂದರು.
ಕೋಟೆ ಕಾರ್ ನಲ್ಲಿ ಪ್ರಕೃತಿ ವಿಕೋಪದಿಂದ ತೊಂದರೆ ಗೊಳಗಾದವರಿಗೆ ಮೀಸಲಿಟ್ಟ ಜಾಗಕ್ಕೆ ಸಂಬಂಧಿಸಿ ಕೌನ್ಸಿಲರ್ ರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಮನೆ ಕಳೆದುಕೊಂಡವರಿಗೆ ಕೋಟೆ ಕಾರ್ ನಲ್ಲಿ ಜಾಗ ಮೀಸಲಿಟ್ಟದ್ದು ಇದೆ.ಈ ಜಾಗ ನ್ಯಾಯಾಲಯ ದಲ್ಲಿದೆ. ನ್ಯಾಯಾಲಯದ ತೀರ್ಮಾನ ಬರುವವರೆಗೆ ಏನು ಮಾಡಲಾಗುವುದಿಲ್ಲ.ತೀರ್ಮಾನ ಬಂದ ಮೇಲೆ ಜಾಗ ಒತ್ತುವರಿ ಮಾಡುತ್ತೇವೆ.ಈ ಜಾಗದಲ್ಲಿ ಇರುವ ಕಟ್ಟಡ ತೆರವು ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಕೌನ್ಸಿಲರ್ ಗಳು, ವಿವಿಧ ಸಂಘಟಕರು ಕೆಲವು ಸಮಸ್ಯೆ ಗಳನ್ನು ಪ್ರಸ್ತಾಪಿಸಿ ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ನಗರ ಸಭೆ ಪೌರಾಯುಕ್ತ ರಾಯಪ್ಪ, ಅಧ್ಯಕ್ಷ ಚಿತ್ರ ಕಲಾ, ಉಪಾಧ್ಯಕ್ಷ ಅಯ್ಯೂಬ್ ಮಂಚಿಲ, ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ವಾಣಿ, ತಹಶೀಲ್ದಾರ್ ಗುರುಪ್ರಸಾದ್, ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್, ಗ್ರಾಮಕರಣಿಕ ಪ್ರಮೋದ್,ಜಿಲ್ಲಾ ಅಗ್ನಿ ಶಾಮಕ ದಳದ ಅಧಿಕಾರಿ ಭರತ್ ಕುಮಾರ್, ವೆಲ್ಫೇರ್ ಪಾರ್ಟಿ ತಂಡದ ಸದಸ್ಯರು,ಕಂದಾಯ ಅಧಿಕಾರಿಗಳು,ಮೆಸ್ಕಾಂ ಎ.ಡಬ್ಲ್ಯು ದಯಾನಂದ್, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಸದಾನಂದ ಬಂಗೇರ, ಅಕ್ರಮ್ ಹಸನ್ ಉಪಸ್ಥಿತರಿದ್ದರು