ಮಲ್ಲೂರು: ನದಿಯಲ್ಲಿ ಮುಳುಗಿ ಬಾಲಕ ಮೃತ್ಯು
ಮನ್ಸೂರ್
ಮಂಗಳೂರು, ಮೇ 16: ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲೂರು ಸಮೀಪದ ಉದ್ದಬೆಟ್ಟು ಎಂಬಲ್ಲಿನ ಫಲ್ಗುಣಿ ನದಿಯಲ್ಲಿ ಬಾಲಕನೊಬ್ಬ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಮೃತಪಟ್ಟ ಘಟನೆ ರವಿವಾರ ಸಂಜೆ ನಡೆದಿದೆ.
ಉದ್ದಬೆಟ್ಟುವಿನ ಅಬ್ದುಲ್ ಖಾದರ್ ಎಂಬವರ ಪುತ್ರ ಮನ್ಸೂರ್ (17) ಮೃತ ಬಾಲಕ.
ಸಾಧಾರಣವಾಗಿ ಈತ ಆಟವಾಡುತ್ತಾ ಫಲ್ಗುಣಿ ನದಿಯತ್ತ ಹೋಗುತ್ತಿದ್ದು, ರವಿವಾರವೂ ಎಂದಿನಂತೆ ನದಿಯತ್ತ ಹೋಗಿದ್ದ ಎನ್ನಲಾಗಿದೆ. ಶನಿವಾರ ಸುರಿದ ಭಾರೀ ಮಳೆಯಿಂದಾಗಿ ನೀರಿನ ಆಳ ಅರಿಯದೆ ಅಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಮನ್ಸೂರ್ ಕಾಲುಜಾರಿ ಬಿದ್ದು ಮುಳುಗುತ್ತಿದ್ದುದನ್ನು ಕಂಡ ಸ್ಥಳೀಯರಾದ ಸಿರಾಜುದ್ದೀನ್ ಮತ್ತು ನಾಸಿರ್ ಎಂಬವರು ರಕ್ಷಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಮಂಗಳೂರು ಗ್ರಾಮಾಂತರ ಪೊಲೀಸರು ತೆರಳಿದ್ದು, ತನಿಖೆ ನಡೆಸುತ್ತಿದ್ದಾರೆ.
Next Story