varthabharthi


ರಾಷ್ಟ್ರೀಯ

ಚುನಾವಣೆ ಕರ್ತವ್ಯದ ವೇಳೆ 1,621 ಶಿಕ್ಷಕರ ಸಾವು: ʼಕೇವಲ ಮೂವರು ಮೃತಪಟ್ಟಿದ್ದಾರೆʼ ಎನ್ನುತ್ತಿರುವ ಉತ್ತರಪ್ರದೇಶ ಸರಕಾರ

ವಾರ್ತಾ ಭಾರತಿ : 19 May, 2021

ಸಾಂದರ್ಭಿಕ ಚಿತ್ರ

ಲಕ್ನೋ, ಮೇ 19: ಉತ್ತರಪ್ರದೇಶದ ಪಂಚಾಯತ್ ಚುನಾವಣೆಯ ಕರ್ತವ್ಯದ ಸಂದರ್ಭ 1,621 ಅದ್ಯಾಪಕರು ಹಾಗೂ ಸಹಾಯಕ ಸಿಬ್ಬಂದಿ ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂಬ ಅಧ್ಯಾಪಕರ ಒಕ್ಕೂಟದ ಪ್ರತಿಪಾದನೆಯನ್ನು ಉತ್ತರಪ್ರದೇಶ ಸರಕಾರ ತಿರಸ್ಕರಿಸಿದೆ. ಪಂಚಾಯತ್ ಚುನಾವಣಾ ಕರ್ತವ್ಯದ ಸಂದರ್ಭ ಕೇವಲ ಮೂವರು ಅಧ್ಯಾಪಕರು ಮಾತ್ರ ಮೃತಪಟ್ಟಿದ್ದಾರೆ ಎಂದು ರಾಜ್ಯ ಸರಕಾರ ಪ್ರತಿಪಾದಿಸಿದೆ.

ರಾಜ್ಯದಲ್ಲಿ ನಡೆದ ಪಂಚಾಯತ್ ಚುನಾವಣೆಯ ಸಂದರ್ಭ ಉತ್ತರಪ್ರದೇಶದ ಎಲ್ಲ 75 ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ 1,621 ಅದ್ಯಾಪಕರು, ಬೋಧಕರು, ಶಿಕ್ಷಾ ಮಿತ್ರ ಹಾಗೂ ಸಿಬ್ಬಂದಿಗಳ ಪಟ್ಟಿಯನ್ನು ಪ್ರಾಥಮಿಕ ಅದ್ಯಾಪಕರ ಸಂಘಟನೆ ಬಿಡುಗಡೆ ಮಾಡಿದೆ.

ಕೊರೋನ ಸೋಂಕಿನ ಎರಡನೇ ಅಲೆಯ ಸಂದರ್ಭ ರಾಜ್ಯದಲ್ಲಿ ಪಂಚಾಯತ್ ಚುನಾವಣೆ ನಡೆಸಲು ನಿರ್ಧರಿಸಿದ ರಾಜ್ಯ ಸರಕಾರದ ಕುರಿತು ಅದ್ಯಾಪಕರ ಒಕ್ಕೂಟ ಪ್ರಶ್ನೆ ಎತ್ತಿದೆ. ಕೊರೋನ ಸೋಂಕಿನ ಸಂಖ್ಯೆ ತೀವ್ರವಾಗಿ ಏರುತ್ತಿರುವುದನ್ನು ಗಮನದಲ್ಲಿರಿಸಿ ಚುನಾವಣೆಯನ್ನು ಮುಂದೂಡಬಹುದಿತ್ತು. ಚುನಾವಣೆ ನಡೆಸಿರುವುದರಿಂದ 1,621 ಉದ್ಯೋಗಿಗಳು ಮೃತಪಟ್ಟಿದ್ದಾರೆ ಎಂದು ಒಕ್ಕೂಟ ವಾದಿಸಿದೆ.

ಆದರೆ, ರಾಜ್ಯ ಸರಕಾರದ ಮೂಲಭೂತ ಶಿಕ್ಷಣ ಮಂಡಳಿ, ಉತ್ತರಪ್ರದೇಶದಲ್ಲಿ ಪಂಚಾಯತ್ ಚುನಾವಣೆ ಅವಧಿಯಲ್ಲಿ ಕೊರೋನ ಸೋಂಕಿನಿಂದ ಕೇವಲ ಮೂವರು ಅದ್ಯಾಪಕರು ಮಾತ್ರ ಮೃತಪಟ್ಟಿದ್ದಾರೆ ಎಂದು ಪ್ರತಿಪಾದಿಸಿದೆ.

 ಒಬ್ಬ ವ್ಯಕ್ತಿಯು ಚುನಾವಣಾ ಕೆಲಸಕ್ಕೆ ತೆರಳುವ, ತರಬೇತಿ ಪಡೆಯುವ ಹಾಗೂ ಚುನಾವಣಾ ಕರ್ತವ್ಯ ಪೂರ್ಣಗೊಳಿಸಿ ಮನೆಗೆ ಹೋಗುವ ಅವಧಿಯನ್ನು ಚುನಾವಣಾ ಅವಧಿ ಒಳಗೊಳ್ಳುತ್ತದೆ. ಆದುದರಿಂದ ಚುನಾವಣಾ ಕರ್ತವ್ಯದ ಸಂದರ್ಭ ಕೇವಲ ಕೊರೋನ ಸೋಂಕಿನಿಂದ ಕೇವಲ ಮೂವರು ಮಾತ್ರ ಮೃತಪಟ್ಟಿದ್ದಾರೆ ಎಂದು ರಾಜ್ಯ ಮಂಡಳಿ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

 ಇನ್ನೊಂದೆಡೆ ಹಿರಿಯ ಪ್ರಾಥಮಿಕ ಅದ್ಯಾಪಕ ಉದ್ಯೋಗಿಗಳ ಒಕ್ಕೂಟದ ಅಧ್ಯಕ್ಷ ದಿನೇಶ್ ಚಂದ್ರ ಶರ್ಮಾ, ಮೂರನೇ ಸುತ್ತಿನ ಪಂಚಾಯತ್ ಚುನಾವಣೆ ಸಂದರ್ಭ 706 ಅದ್ಯಾಪಕರು ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ. ಮತ ಎಣಿಕೆಯ ಸಂದರ್ಭ ಈ ಸಂಖ್ಯೆ 1,600ಕ್ಕೆ ಏರಿಕೆಯಾಗಿತ್ತು ಎಂದು ಹೇಳಿದ್ದಾರೆ.
 
ಆದರೆ, ರಾಜ್ಯ ಸರಕಾರ ಮೂರು ಸಾವನ್ನು ಮಾತ್ರ ಒಪ್ಪಿಕೊಂಡಿದೆ. ಅಲ್ಲದೆ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 30 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಘೋಷಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)