varthabharthi


ಕರ್ನಾಟಕ

ಸರಕಾರ ಘೋಷಿಸಿದ ಪ್ಯಾಕೇಜ್‌ ಅವೈಜ್ಞಾನಿಕ, ಅಸಮರ್ಪಕ: ಮಾಜಿ ಸಿಎಂ ಕುಮಾರಸ್ವಾಮಿ

ವಾರ್ತಾ ಭಾರತಿ : 19 May, 2021

ಬೆಂಗಳೂರು, ಮೇ 19: ಜನಹಿತದ ಲಾಕ್‌ಡೌನ್‌ ಘೋಷಿಸಬೇಕು, ಅದರಲ್ಲಿ ಜನರಿಗೆ ಉಪಯೋಗವಾಗುವ ಪ್ಯಾಕೇಜ್‌ ಇರಬೇಕು ಎಂಬ ಜೆಡಿಎಸ್‌ನ ಆಗ್ರಹದ ನಂತರ ರಾಜ್ಯ ಸರ್ಕಾರ ಪ್ಯಾಕೇಜ್‌ ಘೋಷಿಸಿದೆ. ಆದರೆ, 6.5 ಕೋಟಿ ಜನಸಂಖ್ಯೆ ಇರುವ, ದೇಶಕ್ಕಾಗಿ ಅಪಾರ ಅರ್ಥಿಕ ಕೊಡುಗೆ ನೀಡುವ ಕರ್ನಾಟಕದಂತ ದೊಡ್ಡ ರಾಜ್ಯಕ್ಕೆ ಈ ಪ್ಯಾಕೇಜ್‌ ಅತ್ಯಂತ ಕಡಿಮೆ. ಇದು ಅವೈಜ್ಞಾನಿಕ, ಅಸಮರ್ಪಕ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಲಾಕ್‌ಡೌನ್‌ ಮಾಡಿ ಎಂದು ನಾನು ಮಾರ್ಚ್‌ನಲ್ಲೇ ಹೇಳಿದ್ದೆ. ಆದರೆ, ಘೋಷಿಸಲಿಲ್ಲ. ನೆರೆಯ ಕೇರಳದಲ್ಲಿ ಮಾರ್ಚ್‌ನಲ್ಲೇ ಲಾಕ್‌ಡೌನ್‌ ಜಾರಿಯಾಯಿತು. 20,000 ಕೋಟಿ ಪ್ಯಾಕೇಜ್‌ಅನ್ನೂ ಘೋಷಿಸಲಾಯಿತು. ಕರ್ನಾಕಟದ ಎದುರು ಕೇರಳ ಎಲ್ಲ ದೃಷ್ಟಿಯಿಂದಲೂ ಸಣ್ಣ ರಾಜ್ಯ. ಆದರೆ, ಅವರಿಗಿಂತ ದೊಡ್ಡ ರಾಜ್ಯವಾದ ಕರ್ನಾಟಕಕ್ಕೆ ಈ 1200 ಕೋಟಿ ಪರಿಹಾರ ಸಾಕೆ? ಎಂದು ಪ್ರಶ್ನಿಸಿದ್ದಾರೆ.

''ಆರ್ಥಿಕ ಸಂಕಷ್ಟದ ಮಧ್ಯೆ ಪ್ಯಾಕೇಜ್‌ ನೀಡುತ್ತಿರುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ನನ್ನಿಂದ ಅಧಿಕಾರ ಕಸಿದಾಗ ಇದೇ ಬಿಎಸ್‌ವೈ ಅವರು ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದಿದ್ದರು. 2 ವರ್ಷದಲ್ಲಿ ಆರ್ಥಿಕ ದುಸ್ಥಿತಿ ಬಂದಿದ್ದು ಹೇಗೆ? ರಾಜಕೀಯಕ್ಕಾಗಿ ಮಾಡಿಕೊಂಡ ನಿಗಮಗಳಿಗೆ ನೂರಾರು ಕೋಟಿ ಹಣವಿರುವಾಗ ಜನರ ಪರಿಹಾರಕ್ಕಿಲ್ಲವೇ?''

''ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ ಎಂಬ ಬಿಎಸ್ವೈ ಮಾತು ಒಪ್ಪೋಣ. ಆದರೆ, ನಿಗಮ-ಮಂಡಳಿಗಳಿಗೆ ಅನಗತ್ಯವಾಗಿ ತುಂಬಲಾಗಿರುವ ಬಿಜೆಪಿ ಕಾರ್ಯಕರ್ತರಿಗೆ ಹಣ ನೀಡಲು ಆರ್ಥಿಕ ಸಂಕಷ್ಟ ಇಲ್ಲವೇ? ಜನರೇ ನೀಡಿದ ಹಣವನ್ನು ಜನರಿಗೆ ನೀಡಲು ಮಾತ್ರ ಸಂಕಷ್ಟ ಎದುರಾಗಿದೆಯೇ? ನಿಮ್ಮ ಕಾರ್ಯಕರ್ತರಿಗೆ ನಿಗಮ-ಮಂಡಳಿ ನೆಪದಲ್ಲಿ ನೀಡುತ್ತಿರುವುದು ಜನರ ಹಣವಲ್ಲವೇ?''

''ಪ್ಯಾಕೇಜ್‌ನಲ್ಲಿ ಕೃಷಿ ರಂಗವನ್ನು ಹೂ ಬೆಳೆಗಾರರು, ಹಣ್ಣ-ತರಕಾರಿ ಬೆಳೆಗಾರರೆಂದು ಪ್ರತ್ಯೇಕಿಸಲಾಗಿದೆ. ಅತ್ಯಂತ ಅವೈಜ್ಞಾನಿಕ ಕ್ರಮವಿದು. ಒಟ್ಟು ಕೃಷಿ ಕ್ಷೇತ್ರ, ಒಟ್ಟು ರೈತ ಸಮುದಾಯ ಎಂಬ ಪರಿಕಲ್ಪನೆಯೇ ಇಲ್ಲಿಲ್ಲ. ಕೃಷಿ ಕ್ಷೇತ್ರದ ಇತರೆ ಕಸುಬುದಾರರನ್ನು ಪ್ಯಾಕೇಜ್‌ನಿಂದ ಹೊರಗಿಟ್ಟಿದ್ದು ಯಾಕೆ? ಪ್ಯಾಕೇಜ್‌ ಹಿಗ್ಗುತ್ತದೆ ಎಂಬ ಭಯವೇ?''

''2.10 ಲಕ್ಷ ಚಾಲಕ ವರ್ಗಕ್ಕೆ 3,000 ರೂ. ಪರಿಹಾರ ನೀಡುವುದಾಗಿ ಹೇಳಲಾಗಿದೆ. ಕಳೆದ ಬಾರಿಯ ಲಾಕ್‌ಡೌನ್‌ನಲ್ಲಿ 7.50 ಲಕ್ಷ ಇದ್ದ ಚಾಲಕರ ಸಂಖ್ಯೆ ಈ ಬಾರಿ 2.10 ಲಕ್ಷಕ್ಕೆ ಇಳಿದಿದೆ. ಚಾಲಕರಿಗೆ ಈಗ ಪರಿಹಾರಕ್ಕಿಂತಲೂ ಮುಖ್ಯವಾಗಿ, ಆರ್‌ಟಿಒ ಶುಲ್ಕಗಳು, ತೆರಿಗೆಯಿಂದ ವಿನಾಯಿತಿ ಸಿಗಬೇಕಿತ್ತು. ಈಗಿನ ಪರಿಹಾರದಿಂದ ಅವರ ಕುಟುಂಬ ನಡೆಯಲು ಸಾಧ್ಯವೇ?''

''ಕೂಲಿ ಕಾರ್ಮಿಕರು ಸದ್ಯ ನಗರ ತೊರೆದು ಹಳ್ಳಿ ಸೇರಿದ್ದಾರೆ. ಅವರ ಅದಾಯ ವೃದ್ಧಿಗಾಗಿ ನರೇಗಾವನ್ನು ಬಳಸಿಕೊಳ್ಳಲು ಸರ್ಕಾರಕ್ಕೆ ಅವಕಾಶವಿತ್ತು. ನರೇಗಾಕ್ಕೆ ಹೆಚ್ಚಿನ ಅನುದಾನ ಒದಗಿಸಿ, ಗ್ರಾಮೀಣ ಮೂಲಸೌಕರ್ಯ ಹೆಚ್ಚಿಸಿ, ಕೂಲಿ ಕಾರ್ಮಿಕರ ಆದಾಯ ವೃದ್ಧಿಸಲು ಇದ್ದ ಅವಕಾಶವನ್ನು ಸರ್ಕಾರ ಕಳೆದುಕೊಂಡಿದೆ. ಈ ಸರ್ಕಾರಕ್ಕೆ ದೂರಾಲೋಚನೆಗಳೇ ಇಲ್ಲ ಎಂದು ಟೀಕಿಸಿದ್ದಾರೆ.

''ಸರ್ಕಾರ ಈಗ ನಿಗದಿ ಮಾಡಿರುವ 3 ತಿಂಗಳ ಅವಧಿಯ ಸಾಲ ಮರುಪಾವತಿಯ ಹೊಣೆಯನ್ನು ಸರ್ಕಾರವೇ ಹೊತ್ತುಕೊಳ್ಳಬೇಕಾಗಿತ್ತು. ಮೂರು ತಿಂಗಳಿಗೆ ಸರ್ಕಾರವೇ ಸಾಲ ಮರು ಪಾವತಿ ಮಾಡಬೇಕಾಗಿತ್ತು ಅಥವಾ ಮರುಪಾವತಿಯನ್ನು ಮನ್ನಾ ಮಾಡಬೇಕಾಗಿತ್ತು. ನಾನು ರೈತರ ಸಾಲ ಮನ್ನಾ ಮಾಡಿ ಸರ್ಕಾರದಿಂದ ಹೊರ ಬಂದಿದ್ದೆ. ಹೀಗಾಗಿ ರೈತರ ಸಾಲದ ಹೊರೆ ದೊಡ್ಡದೇನೂ ಇರಲಿಲ್ಲ.''

''ನಿತ್ಯ 6 ಲಕ್ಷ ಮಂದಿ ಇಂದಿರಾ ಕ್ಯಾಂಟೀನ್‌ಗಳಲ್ಲಿ ಆಹಾರ ಪಡೆಯುತ್ತಿರುವುದಾಗಿ ಹೇಳಲಾಗಿದೆ. ಇಂದಿರಾ ಕ್ಯಾಂಟೀನ್‌ಗಳ ಎದುರು ಜನರೇ ಇಲ್ಲ. ಆದರೆ, ಪ್ರತಿ ದಿನ 6 ಲಕ್ಷ ಜನರ ಲೆಕ್ಕ ಕೊಟ್ಟು ಸರ್ಕಾರ ಯಾವ ಕಂಟ್ರಾಕ್ಟರ್‌ ಅನ್ನು ಉದ್ದಾರ ಮಾಡುತ್ತಿದೆ. ಕ್ಯಾಂಟೀನ್‌ಗಳ ಎದುರು ಇರುವ ಜನಸಂದಣಿಯನ್ನು ಸರ್ಕಾರ ವಿಡಿಯೊ ಮಾಡಿ ಬಿಡುಗಡೆ ಮಾಡಬಲ್ಲದೇ? ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)