varthabharthi


ರಾಷ್ಟ್ರೀಯ

ದ್ವಿದಳ ಧಾನ್ಯ ಆಮದು ಕುರಿತಾದ ಆದೇಶ ಹಿಂದೆಗೆಯಿರಿ: ಆರೆಸ್ಸೆಸ್‌ ನ ರೈತ ಸಂಘಟನೆಯಿಂದ ಪ್ರಧಾನಿ ಮೋದಿಗೆ ಮನವಿ

ವಾರ್ತಾ ಭಾರತಿ : 19 May, 2021

ಹೊಸದಿಲ್ಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗಸಂಸ್ಥೆ ರೈತ ಸಂಘಟನೆಯಾಗಿರುವ ಭಾರತೀಯ ಕಿಸಾನ್‌ ಯೂನಿಯನ್‌ ಕೇಂದ್ರ ಸಚಿವಾಯಲದ ಆದೇಶವನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದೆ. ದ್ವಿದಳ ಧಾನ್ಯಗಳ ಆಮದು ಕುರಿತಾದಂತೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯವು ಹೊರಡಿಸಿರುವ ನೂತನ ಆದೇಶವನ್ನು ಹಿಂದೆಗೆದುಕೊಳ್ಳಬೇಕು ಎಂದು ಅದು ಮನವಿ ಮಾಡಿದೆ.

ಮೂರು ವರ್ಷಗಳ ಬಳಿಕ ಸಚಿವಾಲಯವು ದ್ವಿದಳ ಧಾನ್ಯಗಳ ಆಮದು ನೀತಿಯನ್ನು ಪರಿಷ್ಕರಣೆ ಮಾಡಿದ್ದು, 2021 ಅಕ್ಟೋಬರ್‌ 31ರವರೆಗೆ ಕೆಲ ಧಾನ್ಯಗಳನ್ನು ಉಚಿತವಾಗಿ ಆಮದು ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ. ಇದರಿಂದ ತಮ್ಮ ಬೆಳೆಗಳಿಗೆ ಕಡಿಮೆ ದರ ದೊರಕುವ ಭೀತಿಯಲ್ಲಿ ದೇಶೀಯ ರೈತರಿದ್ದಾರೆ.

"ಈಗಾಗಲೇ ಅಕ್ಟೋಬರ್‌ ವರೆಗೆ ಆಮದು ಮಾಡಲು ಗೊತ್ತುಪಡಿಸಿದ್ದ ದ್ವಿದಳ ಧಾನ್ಯಗಳನ್ನು ಖಾರಿಫ್‌ (ಜೂನ್‌ ನಿಂದ ಸೆಪ್ಟೆಂಬರ್‌ ಅವಧಿಯಲ್ಲಿ) ಸಮಯದಲ್ಲಿ ಬಿತ್ತನೆ ಮಾಡಲಾಗಿದೆ. ಈಗ ಸರಕಾರ ನೀಡಿರುವ ಆದೇಶವು ಕೃಷಿ ಕ್ಷೇತ್ರದಲ್ಲಿ ಸರ್ಕಾರವೇ ಹೇಳಿರುವಂತೆ ಆತ್ಮನಿರ್ಭರ ಭಾರತದ ಗುರಿಯ ವಿರುದ್ಧವಾಗಿದೆ. ರೈತರು ತಮ್ಮ ದ್ವಿದಳ ಧಾನ್ಯಗಳಿಗೆ ಕಡಿಮೆ ಬೆಲೆ ದೊರುಕುವ ನಿರೀಕ್ಷೆಯಲ್ಲಿದ್ದು, ಈ ಕಾರಣದಿಂದ ಮುಂದಿನ ವರ್ಷ ಬಿತ್ತನೆಗೂ ಅವರು ಮುಂದಾಗುವುದಿಲ್ಲ. ಇದು ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ" ಎಂದು ಸಂಘಟನೆ ಹೇಳಿದೆ.

"ವರ್ಷಗಳ ಕಠಿಣ ಶ್ರಮದ ಬಳಿಕ ನಮ್ಮ ದೇಶದ ರೈತರು ಜನತೆಯ ಬೇಡಿಕೆಗಳಿಗೆ ಅನುಗುಣವಾಗಿ ದ್ವಿದಳ ಧಾನ್ಯಗಳನ್ನು ಬೆಳೆಯಲು ಪ್ರಾರಂಭಿಸಿದ್ದಾರೆ. ಆದರೆ ಸರಕಾರದ ಈ ನಿರ್ಧಾರವು ದ್ವಿದಳ ಧಾನ್ಯಗಳ ಬಿತ್ತನೆ ಮತ್ತು ಉತ್ಪಾದನೆಗೆ ಅಡ್ಡಿಯುಂಟು ಮಾಡುತ್ತದೆ" ಎಂದು ಅವರು ಹೇಳಿಕೆ ನೀಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)