ಇದಕ್ಕೆ ಕೊನೆಯಿಲ್ಲವೇ?
ಮಾನ್ಯರೇ,
ರಾಜಸ್ಥಾನದ ಹನುಮಾನ್ಗಡ ಜಿಲ್ಲೆಯಲ್ಲಿ ಇತ್ತೀಚೆಗೆ ದಲಿತ ವ್ಯಕ್ತಿಯ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಆತನ ಸಾವಿನೊಂದಿಗೆ ಅಂತ್ಯವಾಗಿದ್ದು ವಿಷಾದನೀಯ. ಅಹಿಂಸೆಯನ್ನು ಪ್ರತಿಪಾದಿಸುವ ಬುದ್ಧ ಹುಟ್ಟಿದ ಈ ದೇಶದಲ್ಲಿ ದಲಿತರ ನೋವಿನ ಶೋಕಕ್ಕೆ ಕೊನೆಯೇ ಇಲ್ಲವೆಂಬಂತಾಗಿದೆ. ದಲಿತರ ಮೇಲಿನ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿರುವುದು ದೇಶಾದ್ಯಂತ ತಳಮಳಕ್ಕೆ ಕಾರಣವಾಗಿದೆ. ವಿನೋದ್ ಬಾಮ್ನಿಯ ಎಂಬ ದಲಿತ ಜನಾಂಗಕ್ಕೆ ಸೇರಿದ ಯುವಕ ತನ್ನ ಮನೆಯ ಹೊರಗಡೆ ಗೋಡೆಯ ಮೇಲೆ ಅಂಬೇಡ್ಕರ್ ಫೋಟೊವನ್ನು ಅಂಟಿಸಿದ್ದ ಕಾರಣಕ್ಕಾಗಿ ಸವರ್ಣೀಯ ಗುಂಪೊಂದು ಬಂದು ಬೆದರಿಸಿ ಆ ಫೋಟೊವನ್ನು ತೆಗೆಯಲು ಹೇಳಿದ್ದು, ನೈತಿಕತೆಯಿಂದ ಪ್ರಶ್ನೆ ಮಾಡಿ ಸ್ವಾಭಿಮಾನದಿಂದ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಜಾತಿಯ ಹೆಸರಿನಿಂದ ನಿಂದಿಸಿ ಮುಗ್ಧ ಯುವಕನ ಜೀವವನ್ನೇ ತೆಗೆದಿದ್ದಾರೆ. ಆಳ್ವಿಕೆ ನಡೆಸುವ ಸರಕಾರಗಳು ಸಂವಿಧಾನದ ಮೂಲ ಆಶಯ ತತ್ವವಾದ ಜಾತ್ಯತೀತ ಮನೋಭಾವನೆಯಿಂದ ದೇಶದಲ್ಲಿ ಎಲ್ಲರೂ ಒಂದೇ ಎಂಬ ಅಜೆಂಡಾದೊಂದಿಗೆ ಆಡಳಿತ ನಡೆಸಿದರೆ ಸ್ವಸ್ಥ ಸಮಾಜದಲ್ಲಿ ಅಂಟಿರುವ ಜಾತಿಯ ರೋಗದ ಹೊದಿಕೆ ನಿಧಾನವಾಗಿಯಾದರೂ ಮಾಯವಾಗಬಹುದೇನೋ. ಆದರೆ, ಈಗ ನಮ್ಮನ್ನಾಳುತ್ತಿರುವ ಸರಕಾರಗಳಿಂದ ಇಂತಹ ನಡೆ ಸಾಧ್ಯವೇ?