ಅಯೋಧ್ಯೆ ಜಮೀನು ಖರೀದಿ ಪ್ರಕರಣ: ಸುಪ್ರೀಂಕೋರ್ಟ್ ನೇತೃತ್ವದ ತನಿಖೆಗೆ ಪ್ರಿಯಾಂಕಾ ಆಗ್ರಹ
"ಪ್ರಧಾನಿ ಮೋದಿ ತಮ್ಮ ನಿಕಟವರ್ತಿಗಳನ್ನು ಟ್ರಸ್ಟಿಗಳನ್ನಾಗಿ ನೇಮಿಸಿದ್ದಾರೆ"
ಹೊಸದಿಲ್ಲಿ, ಜೂ.17: ಅಯೋಧ್ಯೆಯ ರಾಮಮಂದಿರ ಟ್ರಸ್ಟ್ ನಡೆಸಿದ ಜಮೀನು ಖರೀದಿ ವ್ಯವಹಾರದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಬಗ್ಗೆ ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ಆಗ್ರಹಿಸಿದ್ದಾರೆ.
ನಂಬಿಕೆಯಲ್ಲೂ ಸ್ವಹಿತಾಸಕ್ತಿಗೆ ಅವಕಾಶ ಹುಡುಕುವ ಪ್ರಯತ್ನ ಕೋಟ್ಯಂತರ ಜನರ ವಿಶ್ವಾಸದ ಮೇಲಿನ ಆಕ್ರಮಣವಾಗಿದೆ ಮತ್ತು ಇದೊಂದು ದೊಡ್ಡ ಪಾಪ(ಅಪರಾಧ) ’ ಎಂದು ಫೇಸ್ಪುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಎಂಬುದು ಪ್ರಧಾನಿ ನರೇಂದ್ರ ಮೋದಿ ರಚಿಸಿದ ಟ್ರಸ್ಟ್ ಆಗಿದ್ದು ತಮ್ಮ ನಿಕಟವರ್ತಿಗಳನ್ನು ಟ್ರಸ್ಟಿಗಳನ್ನಾಗಿ ನೇಮಿಸಿದ್ದಾರೆ. ಮಂದಿರ ನಿರ್ಮಾಣಕ್ಕೆ ಕೋಟ್ಯಂತರ ಭಕ್ತರು ನೀಡಿದ ದೇಣಿಗೆಯ ಒಂದು ಪೈಸೆಯೂ ದುರ್ಬಳಕೆಯಾಗದಂತೆ ನೋಡಿಕೊಳ್ಳುವುದು ಪ್ರಧಾನಿಯ ಹೊಣೆಗಾರಿಕೆಯಾಗಿದೆ. ಅಲ್ಲದೆ, ಸುಪ್ರೀಂಕೋರ್ಟ್ ನ ನಿರ್ದೇಶನದಂತೆ ಟ್ರಸ್ಟ್ ರಚನೆಯಾಗಿರುವುದರಿಂದ, ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು ಎಂದು ದೇಶದ ಜನತೆಯ ಪರವಾಗಿ ಆಗ್ರಹಿಸುವುದಾಗಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.