ಪಶು ವೈದ್ಯರಿಂದ ಪತಿಗೆ ಕೊಲೆ ಬೆದರಿಕೆ: ಪತ್ನಿಯ ಆರೋಪ
ಮಂಡ್ಯ, ಜೂ.15: ಶಿವಪುರ ಪಶು ವೈದ್ಯಕೀಯ ಆಸ್ಪತ್ರೆ ವೈದ್ಯ ಡಾ.ಎನ್.ಎಂ.ಸಿದ್ದರಾಮ ಅವರು ಪಶು ವೈದ್ಯಕೀಯ ಸಹಾಯಕರಾದ ತನ್ನ ಪತಿ ಅಸ್ಲಂ ಅವರಿಗೆ ಕೊಲೆ ಬೆದರಿಕೆ ಹಾಕಿ ಆಸ್ಪತ್ರೆಯಿಂದ ಹೊರಗೆ ಹಾಕಿದ್ದಾರೆ ಎಂದು ಅಸ್ಲಂ ಪತ್ನಿ ಜುಬೇದಾ ಆರೋಪಿಸದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತನ್ನ ಪತಿ ಅಸ್ಲಂ ಅವರು ಮೇಲಾಧಿಕಾರಿಯ ಸೂಚನೆ ಮೇರೆಗೆ ಲಸಿಕೆ ತರಲು ಮಂಡ್ಯ ಆಸ್ಪತ್ರೆಗೆ ಹೋಗಿದ್ದ ಹಿನ್ನೆಲೆಯಲ್ಲಿ ಕುಪಿತಗೊಂಡ ಡಾ.ಸಿದ್ದರಾಮ ಅವರು ತನ್ನ ಪತಿಗೆ ಈ ರೀತಿ ಕಿರುಕುಳ ನೀಡುತ್ತಿದ್ದಾರೆ ಎಂದರು.
ಈ ಸಂಬಂಧ ಇಲಾಖೆಯ ಉಪನಿರ್ದೇಶಕ ಡಆ.ಮಂಜುನಾಥ್ ಅವರಿಗೆ ವಿವರ ನೀಡಿದ್ದೇವೆ. ಆದರೆ, ಮಂಜುನಾಥ್ ಅವರು ಸಿದ್ದರಾಮು ಅವರು ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದೆ ನಮಗೇ ಬುದ್ದಿವಾದ ಹೇಳಿ ಕೈತೊಳೆದುಕೊಂಡಿದ್ದಾರೆ ಎಂದು ಅವರು ದೂರಿದರು.
ಮೇಲಾಧಿಕಾರಿಗಳಿಗೆ ದೂರು ನೀಡಿದ ನಂತರವೂ, ಡಾ.ಸಿದ್ದರಾಮು ಅವರು, ನನ್ನ ಪತಿ ಮೇಲೆಯೇ ಆರೋಪ ಹೊರಿಸಿ ಕಾರಣ ಕೇಳಿ ನೊಟೀಸ್ ಜಾರಿ ಮಾಡಿದ್ದಾರೆ. ಕೆಲಸದಿಂದ ವಜಾ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಅವರು ಆಪಾದಿಸಿದರು.
ಘಟನೆಯಿಂದ ನನ್ನ ಕುಟುಂಬ ಆಘಾತಗೊಂಡಿದೆ. ಕೂಡಲೇ ಸಂಬಂಧಪಟ್ಟ ಮೇಲಾಧಿಕಾರಿಗಳು ತನ್ನ ಪತಿಗೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲದಿದ್ದರೆ ಕುಟುಂಬ ಸಮೇತ ಜಿಲ್ಲಾಧಿಕಾರಿ ಕಚೇರಿ ಎದುರು
ಧರಣಿ ಕೂರುತ್ತೇವೆ ಎಂದು ಅವರು ಒತ್ತಾಯಿಸಿದರು.