ನಮ್ಮಲ್ಲಿ ರಾಜಕೀಯ ಗೊಂದಲವೇ ಇಲ್ಲ, ಎಲ್ಲರೂ ಒಂದಾಗಿದ್ದೇವೆ: ಮುಖ್ಯಮಂತ್ರಿ ಯಡಿಯೂರಪ್ಪ
ಬೆಂಗಳೂರು, ಜೂ.18: ನಮ್ಮಲ್ಲಿ ರಾಜಕೀಯ ಗೊಂದಲವೇ ಇಲ್ಲ. ನಿನ್ನೆ 60ರಷ್ಟು ಶಾಸಕರು ಭೇಟಿ ಮಾಡಿದ್ದಾರೆ. ಯಾರೋ ಒಂದಿಬ್ಬರು ನಮ್ಮ ವಿರುದ್ಧ ಮಾತನಾಡುವವರು ಇರುತ್ತಾರೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಒಟ್ಟಾಗಿ, ಒಂದಾಗಿ ಇದ್ದೇವೆ. ಅಭಿವೃದ್ದಿ ಕಾರ್ಯದ ಬಗ್ಗೆ ಗಮನ ಹರಿಸಿದ್ದೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಂಗಾರು ಪ್ರಾರಂಭವಾಗಿದೆ. ಉತ್ತಮ ಮಳೆಯಾಗಿದೆ. ರೈತರು ಬಿತ್ತನೆ ಕಾರ್ಯ ಪ್ರಾರಂಭ ಮಾಡಿದ್ದಾರೆ. ಬೀಜಗಳು, ರಸಗೊಬ್ಬರ ಸಿಗುವುದಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಂಡಿದ್ದೇವೆ. ಪ್ರವಾಹದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ಮಾಡಿದ್ದೇವೆ. ನಾಳೆ ಮಹಾರಾಷ್ಟ್ರ ನೀರಾವರಿ ಸಚಿವರು ಬರುತ್ತಿದ್ದಾರೆ. ಅವರ ಜೊತೆ ಚರ್ಚೆ ಮಾಡುತ್ತೇವೆ ಎಂದರು.
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ನಿಮ್ಮ ವಿರುದ್ಧ ಮಾತನಾಡುತ್ತಿದ್ದಾರಲ್ವಾ ಎಂಬ ಪ್ರಶ್ನೆಗೆ 'ಅವರ ಬಗ್ಗೆ ನಾನು ಮಾತನಾಡಲ್ಲ. ಅವರ ಮೇಲೆ ಏನು ಕ್ರಮ ಕೈಗೊಳ್ಳಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಪ್ರತಿಕ್ರಿಯಿಸಿದರು.
ಎಲ್ಲರೂ ಒಟ್ಟಾಗಿ ಸೇರಿದ್ದರಿಂದ ಕೋವಿಡ್ ಪರಿಸ್ಥಿರಿ ಸುಧಾರಣೆ ಆಗುತ್ತಿದೆ. ಮೂರನೇ ಅಲೆಯೂ ಬರುವ ಸಂಭವವಿದೆ. ಈಗ ಸ್ವಲ್ಪ ಸಡಿಲಿಕೆ ಮಾಡುವ ಅಗತ್ಯವಿದೆ. ಈ ಬಗ್ಗೆ ನಾಳೆ ಸಂಜೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.