ಕನಸನ್ನು ನನಸಾಗಿಸಿಕೊಂಡ ಗ್ರಾಮೀಣ ಯುವಕ: ಶೇ.100 ವಿದ್ಯಾರ್ಥಿ ವೇತನದೊಂದಿಗೆ ಹಳ್ಳಿಯಿಂದ ಸ್ಟಾನ್ಫರ್ಡ್ ವಿವಿಗೆ ಪಯಣ
ಮನು ಚೌಹಾಣ್ (Photo: theprint.in)
ಹೊಸದಿಲ್ಲಿ,ಜೂ.21: ತನ್ನ 12ನೇ ತರಗತಿಯ ಫಲಿತಾಂಶಕ್ಕಾಗಿ ಕಾಯುತ್ತಿರುವ ಉತ್ತರ ಪ್ರದೇಶದ ಅಲಿಗಡ ಜಿಲ್ಲೆಯ ಅಕ್ರಾಬಾದ್ ಗ್ರಾಮದ ಮನು ಚೌಹಾಣ್ (18) ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಪದವಿ ಶಿಕ್ಷಣಕ್ಕಾಗಿ ಅಮೆರಿಕದ ಕ್ಯಾಲಿಫೋರ್ನಿಯಾದ ಪ್ರತಿಷ್ಠಿತ ಸ್ಟಾನ್ಫರ್ಡ್ ವಿವಿಯ ಶೇ.100 ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗುವ ಮೂಲಕ ಉನ್ನತ ಶಿಕ್ಷಣದ ತನ್ನ ಕನಸನ್ನು ನನಸಾಗಿಸಿಕೊಂಡಿದ್ದಾರೆ.
ತನ್ನ ಗ್ರಾಮದಿಂದ ಸ್ಟಾನ್ಫರ್ಡ್ಗೆ ಮನುವಿನ ಪಯಣವು ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪದ ಫಲಶ್ರುತಿಯಾಗಿದೆ. ಕುಟುಂಬದ ಕುಡಿಯ ಕನಸುಗಳನ್ನು ಬೆಂಬಲಿಸುವಷ್ಟು ಹಣ ಮನು ಕುಟುಂಬದ ಬಳಿಯಿಲ್ಲ, ಹೆತ್ತವರು ಕುಟುಂಬದ ತುತ್ತಿನ ಚೀಲಗಳನ್ನು ತುಂಬಿಸಲೂ ಪರದಾಡುತ್ತಿದ್ದಾರೆ. ಆದರೆ ಇವ್ಯಾವುದೂ ಮನುವಿನ ಮಹತ್ವಾಕಾಂಕ್ಷೆಗಳಿಗೆ ಅಡ್ಡಿಯಾಗಲಿಲ್ಲ.
ಸ್ಟಾನ್ಫರ್ಡ್ ವಿವಿಯು ಅತ್ಯುತ್ತಮ ಸಂಶೋಧನಾ ಸೌಲಭ್ಯಗಳನ್ನು ಹೊಂದಿರುವುದರಿಂದ ತಾನು ಅಲ್ಲಿಗೆ ಅರ್ಜಿ ಸಲ್ಲಿಸಿದ್ದೆ ಎಂದು 'ThePrint' ಗೆ ತಿಳಿಸಿದ ಮನು, ತಾನು ಪಟ್ಟ ಕಷ್ಟಗಳು ತನ್ನ ಗ್ರಾಮದ ಮಕ್ಕಳೂ ಅನುಭವಿಸುವಂತಾಗಬಾರದು. ಶೋಷಿತ ವರ್ಗಗಳ ಮಕ್ಕಳಿಗೆ ಉತ್ತಮ ಶಿಕ್ಷಣ ಸಾಧ್ಯವಾಗುವಂತೆ ಮಾಡಲು ಮಾರ್ಗೋಪಾಯಗಳನ್ನು ರೂಪಿಸುವ ಕನಸನ್ನು ತಾನು ಹೊಂದಿರುವುದಾಗಿ ತಿಳಿಸಿದರು. ಕನಸುಗಳನ್ನು ನನಸಾಗಿಸಲು ಸಂಪನ್ಮೂಲಗಳು ಇಲ್ಲದಿರುವುದು ಎಷ್ಟೊಂದು ನೋವನ್ನುಂಟು ಮಾಡುತ್ತದೆ ಎನ್ನುವುದು ತನಗೆ ಗೊತ್ತು, ಆದ್ದರಿಂದ ತನ್ನ ಗ್ರಾಮದ ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯುವುದನ್ನು ಸುಲಭವಾಗಿಸಲು ತಾನು ಬಯಸಿದ್ದೇನೆ ಎಂದರು.
ಮನುವಿನ ಸಾಧನೆಯ ದಾರಿ ಸುಲಭವಾಗಿರಲಿಲ್ಲ. ಪ್ರತಿ ನಿತ್ಯ 18 ಗಂಟೆಗಳ ಕಾಲ ಅಧ್ಯಯನದಲ್ಲಿ ತೊಡಗಿರುತ್ತಿದ್ದ ಅವರು, ಅಮೆರಿಕದ ಕಾಲೇಜುಗಳಲ್ಲಿ ಪ್ರವೇಶಕ್ಕೆ ಅಗತ್ಯವಾಗಿರುವ ಸ್ಯಾಟ್ ಪರೀಕ್ಷೆಯ ತಯಾರಿಗಾಗಿಯೇ ನಿತ್ಯ ಆರು ಗಂಟೆಗಳ ಸಮಯವನ್ನು ಮೀಸಲಿಟ್ಟಿದ್ದರು.
ಐದನೇ ತರಗತಿಯವರೆಗೆ ಅಕ್ರಾಬಾದ್ ನ ಸರಕಾರಿ ಶಾಲೆಯಲ್ಲಿ ಓದಿದ್ದ ಮನು ಬಳಿಕ ಶಿವ ನಾಡಾರ್ ಪ್ರತಿಷ್ಠಾನದ ವಿದ್ಯಾಜ್ಞಾನ ಸಂಸ್ಥೆಯ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿ ಶಿಕ್ಷಣವನ್ನು ಮುಂದುವರಿಸಿದ್ದರು. ಸಂಪೂರ್ಣ ಉಚಿತ ಶಿಕ್ಷಣದ ಜೊತೆಗೆ ವಿದ್ಯಾಜ್ಞಾನ ತನಗೆ ಹಲವಾರು ರೀತಿಗಳಲ್ಲಿ ನೆರವಾಗಿದೆ, ಸ್ಟಾನ್ಫರ್ಡ್ಗೆ ಅರ್ಜಿಯನ್ನು ಸಿದ್ಧಪಡಿಸಲು ಮತ್ತು ಸ್ಯಾಟ್ ಪರೀಕ್ಷೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲು ಶಾಲೆಯ ಶಿಕ್ಷಕರು ಮತ್ತು ಸಮಾಲೋಚಕರು ತನಗೆ ನೆರವಾಗಿದ್ದರು ಎಂದು ಮನು ಸ್ಮರಿಸಿಕೊಂಡರು.
ಮಗನ ಯಶಸ್ಸಿನಲ್ಲಿ ಮನುವಿನ ತಂದೆ ಪ್ರಮೋದ್ ಕುಮಾರ್ ಚೌಹಾಣ್ ಅವರೂ ಸಮಾನ ಪಾತ್ರವನ್ನು ಹೊಂದಿದ್ದಾರೆ. ಎಳವೆಯಲ್ಲೇ ತನ್ನ ಪುತ್ರನ ಪ್ರತಿಭೆಯನ್ನು ಗುರುತಿಸಿದ್ದ ಅವರು ಆತನ ಕನಸುಗಳನ್ನು ರೂಪಿಸುವಂತಹ ಶಾಲೆಗಳನ್ನು ಅನ್ವೇಷಿಸುತ್ತಿದ್ದರು. ಚೌಹಾಣ್ ಇನ್ಶೂರನ್ಸ್ ಏಜೆಂಟ್ ಆಗಿದ್ದರೆ ಪತ್ನಿ ಗೃಹಿಣಿಯಾಗಿದ್ದಾರೆ. ತುಂಬ ಕಷ್ಟಪಟ್ಟು ಮನುವನ್ನು ತಮ್ಮ ಗ್ರಾಮದಿಂದ 80 ಕಿ.ಮೀ.ದೂರದ ಬುಲಂದಶಹರ್ನ ಹಾಸ್ಟೆಲ್ನಲ್ಲಿರಿಸಿ ಓದಿಸಿದ್ದರು.
ಚರ್ಚಾಸ್ಪರ್ಧೆಗಳಲ್ಲಿ ನಿಯಮಿತವಾಗಿ ಪಾಲ್ಗೊಳ್ಳುತ್ತಿದ್ದ ಮನು ಉತ್ತಮ ಟೇಬಲ್ ಟೆನಿಸ್ ಆಟಗಾರನೂ ಹೌದು. 2018ರಲ್ಲಿ ಮುಕ್ತ ರಾಜ್ಯಮಟ್ಟದ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು.
ಕೋವಿಡ್ ಸಾಂಕ್ರಾಮಿಕ ತನಗೆ ತುಂಬ ಸಮಸ್ಯೆಗಳನ್ನುಂಟು ಮಾಡಿತ್ತು, ಆದರೆ ಆನ್ಲೈನ್ ಮಾರ್ಗಗಳ ಮೂಲಕ ಕೋರ್ಸ್ಗೆ ಅಗತ್ಯವಾದ ವಿಷಯಗಳನ್ನು ಪಡೆಯಲು ತನಗೆ ಸಾಧ್ಯವಾಗಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಅಂತರ್ಜಾಲ ಸಂಪರ್ಕ ತೀರ ಕಳಪೆಯಾಗಿದೆ. ಲಾಕ್ಡೌನ್ ನಲ್ಲಿ ತಾನು ಗ್ರಾಮಕ್ಕೆ ಮರಳಬೇಕಾಗಿತ್ತು. ಅಧ್ಯಯನ ಸಾಮಗ್ರಿಗಳನ್ನು ಪಡೆಯುವುದೇ ಕಷ್ಟವಾಗಿತ್ತು, ಆದರೆ ಕೆಲವು ವೆಬ್ಸೈಟ್ಗಳು ಮತ್ತು ಅಮೆರಿಕದಲ್ಲಿರುವ ಭಾರತೀಯ ವಿದ್ಯಾರ್ಥಿಗಳು ತನಗೆ ತುಂಬ ನೆರವಾಗಿದ್ದರು ಎಂದು ಮನು ಹೇಳಿದರು.
ಕೃಪೆ: theprint.in