ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ
ಮಂಗಳೂರು : ಎರಡು ದಿನದ ಹಿಂದೆ ನಾಪತ್ತೆಯಾಗಿದ್ದ ಸುರತ್ಕಲ್ ಸಮೀಪದ ಚೊಕ್ಕಬೆಟ್ಟು ನಿವಾಸಿ ಶಹಾನ್ (19) ಎಂಬವರ ಮೃತದೇಹ ಸಸಿಹಿತ್ಲು ನದಿ ಕಿನಾರೆಯಲ್ಲಿ ಸೋಮವಾರ ಪತ್ತೆಯಾಗಿದೆ. ಸ್ನೇಹಿತರೊಂದಿಗೆ ಈಜಲು ತೆರಳಿದ ವೇಳೆ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದೆ.
ಜೂ.19ರಂದು ಖಂಡಿಗೆ ಸೇತುವೆ ಬಳಿ ಅನಾಥ ಸ್ಥಿತಿಯಲ್ಲಿ ಬೈಕೊಂದು ಪತ್ತೆಯಾಗಿತ್ತು. ಈ ಬಗ್ಗೆ ಸುರತ್ಕಲ್ ಪೊಲೀಸರು ತನಿಖೆ ನಡೆಸಿದ್ದರು. ಚೊಕ್ಕಬೆಟ್ಟುವಿನ ಶಹಾನ್ ಜೂ.19ರಂದು ಮನೆಯಿಂದ ಹೊರ ಹೋದವ ಮನೆಗೆ ವಾಪಾಸು ಬಂದಿರಲಿಲ್ಲ ಎನ್ನಲಾಗಿತ್ತು. ಮನೆಯವರು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಇದೀಗ ಮನೆ ಮಂದಿ ಮೃತದೇಹವನ್ನು ಗುರುತಿಸಿದ್ದಾರೆ. ಸೈನ್ಯಕ್ಕೆ ಸೇರುವ ಆಸಕ್ತಿಯಿಂದ ಶಹಾನ್ ಭೋಪಾಲ್ನಲ್ಲಿ ತರಬೇತಿಗೂ ಹೋಗಿದ್ದ ಎಂದು ತಿಳಿದು ಬಂದಿದೆ. ಕೊರೋನ ಹಿನ್ನಲೆಯಲ್ಲಿ ಊರಿಗೆ ಮರಳಿದ್ದು, ಮತ್ತೆ ಹೋಗಲು ಸಿದ್ಧತೆ ಮಾಡಿಕೊಂಡಿದ್ದ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ದುರ್ಘಟನೆ ಸಂಭವಿಸಿದೆ. ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.