ಉಡುಪಿ ಜಿಲ್ಲೆಯಲ್ಲಿ ಅನ್ ಲಾಕ್ : ವಾಣಿಜ್ಯ ಚಟುವಟಿಕೆಗಳು ಚುರುಕು
ಉಡುಪಿ, ಜೂ.22: ಉಡುಪಿ ಜಿಲ್ಲೆಯನ್ನು ಅನ್ಲಾಕ್ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಇಂದು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಎಲ್ಲ ಅಂಗಡಿ ಮುಂಗ್ಗಟ್ಟುಗಳು ತೆರೆದಿದ್ದು, ಇದರಿಂದ ವಾಣಿಜ್ಯ ಚಟುವಟಿಕೆಗಳು ಚುರುಕುಗೊಂಡಿದ್ದು, ಈ ಮೂಲಕ ಉಡುಪಿ ಜಿಲ್ಲೆಯು ಸಹಜ ಸ್ಥಿತಿಯತ್ತ ಮರಳಿದೆ.
ಅಂತರ್ ಜಿಲ್ಲಾ ಹಾಗೂ ತಾಲೂಕು ಮಾರ್ಗಗಳಲ್ಲಿ ಕೆಎಸ್ಆರ್ಟಿಸಿ ಬಸ್ ಸಂಚಾರ ಇಂದು ಕೂಡ ಮುಂದುವರೆದಿದೆ. ಕರಾವಳಿ ಬಸ್ ಮಾಲಕ ಸಂಘದ ಅಧೀನದಲ್ಲಿರುವ ನಾಲ್ಕು ಖಾಸಗಿ ಬಸ್ಗಳು ಉಡುಪಿ -ಕುಂದಾಪುರ ಮಾರ್ಗ ದಲ್ಲಿ ಸಂಚಾರ ಆರಂಭಿಸಿವೆ. ಆದರೆ ಕೆನರಾ ಬಸ್ ಮಾಲಕರ ಸಂಘದ ಅಧೀನ ದಲ್ಲಿರುವ ಯಾವುದೇ ಬಸ್ಗಳು ಇಂದು ಕೂಡ ಓಡಾಟ ನಡೆಸಿಲ್ಲ. ಸುಮಾರು ಎರಡು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಬಟ್ಟೆ, ಚಿನ್ನಾಭರಣ, ಚಪ್ಪಲಿ, ಮೊಬೈಲ್, ಫನಿರ್ಚರ್ ಸೇರಿದಂತೆ ಎಲ್ಲ ರೀತಿಯ ವಾಣಿಜ್ಯ ಮಳಿಗೆಗಳು ವ್ಯಾಪಾರ ಆರಂಭಿಸಿದವು. ಆಟೋ ರಿಕ್ಷಾ, ಟ್ಯಾಕ್ಸಿಗಳು ಕೂಡ ರಸ್ತೆಗೆ ಇಳಿದಿವೆ. ನಗರ ಸೇರಿದಂತೆ ಜಿಲ್ಲೆಯಾದ್ಯಂತ ಜನ ಹಾಗೂ ವಾಹನ ಸಂಚಾರ ಹೆಚ್ಚಾಗಿದ್ದವು. ಇದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಕಂಡುಬಂತು. ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನಗರದ ಪ್ರಮುಖ ಜಂಕ್ಷನ್ಗಳಲ್ಲಿ ಟ್ರಾಫಿಕ್ ಪೊಲೀಸರನ್ನು ನಿಯೋಜಿಸಲಾಗಿತ್ತು.