ನೈಸ್ ಕಂಪೆನಿಯ ಗೌರವಕ್ಕೆ ಧಕ್ಕೆ: 2 ಕೋಟಿ ರೂ. ಪರಿಹಾರ ನೀಡಲು ದೇವೇಗೌಡರಿಗೆ ನ್ಯಾಯಾಲಯ ಆದೇಶ
ಬೆಂಗಳೂರು: ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸಸ್ ಲಿಮಿಟೆಡ್(ನೈಸ್) ಕಂಪೆನಿಯ ಗೌರವಕ್ಕೆ ಧಕ್ಕೆಯಾಗುವಂತೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಹೇಳಿಕೆ ನೀಡಿದ್ದರು ಎನ್ನಲಾಗಿದ್ದು, ಈ ಬಗ್ಗೆ ಅವರು ನೈಸ್ ಸಂಸ್ಥೆಗೆ 2 ಕೋಟಿ ರೂ. ಪರಿಹಾರ ನೀಡುವಂತೆ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
'ನೈಸ್' ಸಂಸ್ಥೆ ಸಲ್ಲಿಸಿದ್ದ ಮೊಕದ್ದಮೆ ವಿಚಾರಣೆ ನಡೆಸಿದ 15ನೇ ಸಿಟಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಮಲ್ಲನಗೌಡ ಅವರು, ಈ ಆದೇಶ ಹೊರಡಿಸಿದ್ದಾರೆ.
2011ರ ಜೂನ್ 20ರಂದು ಸಂದರ್ಶನವೊಂದರಲ್ಲಿ ನೈಸ್ ಕಂಪೆನಿಯ ಗೌರವಕ್ಕೆ ಧಕ್ಕೆಯಾಗುವಂತೆ ಹೇಳಿಕೆ ನೀಡಿದ್ದರು ಎನ್ನಲಾಗಿದ್ದು, ‘ಈ ಹೇಳಿಕೆಯಿಂದ ಸಂಸ್ಥೆಯ ಗೌರವಕ್ಕೆ ಧಕ್ಕೆಯಾಗಿದೆ. 10 ಕೋಟಿ ರೂ. ಪರಿಹಾರ ನೀಡಬೇಕು’ ಎಂದು ಕೋರಿ 2012ರಲ್ಲಿ ನೈಸ್ ಸಂಸ್ಥೆ ಮೊಕದ್ದಮೆ ದಾಖಲಿಸಿತ್ತು.
ತಮ್ಮ ಹೇಳಿಕೆ ಸತ್ಯ ಎಂಬುದನ್ನು ದೇವೇಗೌಡರು ಸಾಬೀತುಪಡಿಸಿಲ್ಲ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
Next Story