ದ.ಕ ಜಿಲ್ಲೆಯಲ್ಲಿ ಲಸಿಕೆ ಉಚಿತವಾಗಿ ನೀಡದಿದ್ದರೆ ಪ್ರತಿಭಟನೆ -ಐವನ್ ಡಿ ಸೋಜ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಇಡೀ ದಿನ ಸಡಿಲಿಕೆ ಮಾಡಬೇಕು. ತಕ್ಷಣ ಬಸ್ ಸಂಚಾರ ಆರಂಭಿಸಬೇಕು. ಎಲ್ಲರಿಗೆ ಲಸಿಕೆ ನೀಡಬೇಕು. ಲಸಿಕೆ ಹೆಸರಿನಲ್ಲಿ ವ್ಯಾಪಾರ ನಡೆಸಬಾರದು. ಕೊರೋನ ಸೋಂಕಿನಿಂದ ಮೃತಪಟ್ಟ ಕುಟುಂಬಕ್ಕೆ ಕನಿಷ್ಠ 5 ಲಕ್ಷ ಪರಿಹಾರ ನೀಡಬೇಕು ಎಂದು ಮಾಜಿ ಶಾಸಕ ಐವನ್ ಡಿ ಸೋಜ ಸುದ್ದಿಗೋಷ್ಠಿಯಲ್ಲಿಂದು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಲಾಕ್ ಡೌನ್ ನಿಯಮ ಸಡಿಲಿಕೆಯ ಬಗ್ಗೆ ಸಮರ್ಪಕವಾದ ತೀರ್ಮಾನ ಕೈಗೊಳ್ಳುವಲ್ಲಿ ಜಿಲ್ಲಾಡಳಿತ ವಿಫಲವಾಗಿ ರುವುದರಿಂದ ಜಿಲ್ಲೆಯ ಜನತೆ ತೊಂದರೆ ಅನುಭವಿಸುತ್ತಿದ್ದಾರೆ. ಜಿಲ್ಲೆಯ ಎಲ್ಲಾ ಅಂಗಡಿ ಮಳಿಗೆ ಗಳನ್ನು ತೆರೆದು ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು. ಮದುವೆ, ಅಂತ್ಯ ಸಂಸ್ಕಾರಕ್ಕೆ ನಿಗದಿ ಪಡಿಸಿದ ಮಾನ ದಂಡ ವನ್ನು ಸಡಿಲಿಸಬೇಕು. ಮದುವೆಗೆ ಕನಿಷ್ಠ 100 ಜನರಿಗೆ ಅವಕಾಶ ನೀಡಬೇಕು. ಮನೆಮನೆಗೆ ಲಸಿಕೆ ಯನ್ನು ಉಚಿತವಾಗಿ ನೀಡಬೇಕು. ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಐವನ್ ಡಿ ಸೋಜ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಶಶಿಧರ ಹೆಗ್ಡೆ ,ಮಾಜಿ ಉಪ ಮೇಯರ್ ಮುಹಮ್ಮದ್ ಕುಂಜತ್ತಬೈಲ್, ಕಾಂಗ್ರೆಸ್ ಮುಖಂಡರಾದ ಅಪ್ಪಿ, ಭಾಸ್ಕರ ರಾವ್, ಯೂಸುಫ್ ಉಚ್ಚಿಲ ಮೊದಲಾದವರು ಉಪಸ್ಥಿತರಿದ್ದರು.