ಸಿಬಿಎಸ್ ಇ, ಸಿಐಎಸ್ಸಿಇ ಮೌಲ್ಯ ಮಾಪನ ಮಾನದಂಡ ನ್ಯಾಯೋಚಿತ, ಸಮಂಜಸ: ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಕೋವಿಡ್-19 ಕಾರಣದಿಂದಾಗಿ ನಿಯಮಿತ ಪರೀಕ್ಷೆಗಳನ್ನು ರದ್ದು ಗೊಳಿಸಲಾಗಿರುವುದರಿಂದ ಈ ವರ್ಷದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಅಂಕಗಳನ್ನು ಲೆಕ್ಕಹಾಕಲು ಸಿಬಿಎಸ್ಇ ಮತ್ತು ಸಿಐಎಸ್ಸಿಇ ಪ್ರಸ್ತಾಪಿಸಿರುವ ಮೌಲ್ಯ ಮಾಪನ ಮಾನದಂಡಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಅನುಮೋದನೆ ನೀಡಿದೆ.
ಮೌಲ್ಯಮಾಪನ ಮಾನದಂಡ ಹಾಗೂ ಸಿಬಿಎಸ್ಇ ವಿಭಾಗದ ಪರೀಕ್ಷೆ ರದ್ದತಿಗೆ ಸಂಬಂಧಿಸಿದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎ. ಎಂ. ಖಾನ್ವಿಲ್ಕರ್ ಹಾಗೂ ದಿನೇಶ್ ಮಹೇಶ್ವರಿ ಅವರನ್ನೊಳಗೊಂಡ ವಿಶೇಷ ನ್ಯಾಯಪೀಠವು ಮಂಗಳವಾರ ಆಲಿಸಿತು. ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಎಲ್ಲ ಅರ್ಜಿಗಳನ್ನು ವಜಾಗೊಳಿಸಿತು.
ಶಿಕ್ಷಣ ಮಂಡಳಿಯ ಪ್ರಸ್ತಾಪಗಳನ್ನು 'ನ್ಯಾಯಯುತ ಮತ್ತು ಸಮಂಜಸ' ಎಂದು ಕರೆದ ವಿಶೇಷ ನ್ಯಾಯಪೀಠವು ಇದು ವಿದ್ಯಾರ್ಥಿಗಳ ಹೆಚ್ಚಿನ ಹಿತಾಸಕ್ತಿಗೆ ಕಾರಣವಾಗಿದೆ ಎಂದು ಹೇಳಿತು.
"ಸಿಬಿಎಸ್ಇ ಹಾಗೂ ಐಸಿಎಸ್ಇ ಯೋಜನೆಗಳಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಕಾರಣವಿಲ್ಲ" ಎಂದು 12 ನೇ ತರಗತಿಯ ವಿಭಾಗದ(ಕಂಪಾರ್ಟ್ ಮೆಂಟ್) ಪರೀಕ್ಷೆಗಳನ್ನು ರದ್ದುಗೊಳಿಸುವ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ ಹೇಳಿದೆ.
ಆಗಸ್ಟ್ 15 ಹಾಗೂ ಸೆಪ್ಟೆಂಬರ್ 15 ರ ನಡುವೆ ವಿಭಾಗ ಪರೀಕ್ಷೆಯನ್ನು ನಡೆಸುವ ಸಿಬಿಎಸ್ಇ ಯೋಜನೆಯನ್ನು ನ್ಯಾಯಾಲಯವು ಒಪ್ಪಿಕೊಂಡಿತು.