ಕುಂದಾಪುರ ಶಾಸಕರ ಕಚೇರಿ ಮುಂದೆ ಸಮಾನ ಮನಸ್ಕರಿಂದ ಪ್ರತಿಭಟನೆ
ಕುಂದಾಪುರ, ಜೂ.22: ಸರಕಾರದ ಕೊರೋನಾ ನಿಯಂತ್ರಿಸುವಲ್ಲಿನ ವೈಫಲ್ಯತೆಯನ್ನು ಖಂಡಿಸಿ ಸಮಾನ ಮನಸ್ಕ ಜಾತ್ಯಾತೀತ ಪಕ್ಷಗಳು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ಮತ್ತು ಸಾರ್ವಜನಿಕರ ಸಹಯೋಗದೊಂದಿಗೆ ಮಂಗಳವಾರ ಕುಂದಾಪುರ ಶಾಸಕರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದವು.
ಪ್ರತಿಭಟನೆಯನ್ನುದ್ದೇಶೀಸಿ ಮಾತನಾಡಿದ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ತಾ, ಕೋವಿಡ್ ಮಹಾಮಾರಿಯನ್ನು ನಿಯಂತ್ರಿಸುವಲ್ಲಿ ಮಾತ್ರವಲ್ಲದೆ ಇದೀಗ ಲಸಿಕೆ ನೀಡುವುದರಲ್ಲಿಯೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಫಲವಾಗಿವೆ. ಲಸಿಕಾ ಕೇಂದ್ರದಲ್ಲಿಯೂ ರಾಜಕೀಯ ಮೇಳೈಸುತ್ತಿದ್ದು ತಾರತಮ್ಯತೆ ಧೋರಣೆಯನ್ನು ಅನುಸರಿಸಲಾಗುತ್ತಿದೆ ಎಂದು ದೂರಿದರು.
ನಂತರ ಶಾಸಕರ ಕಚೇರಿಗೆ ತೆರಳಿ ಶಾಸಕರ ಆಪ್ತ ಸಹಾಯಕರಲ್ಲಿ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ತಾಲೂಕು ಅಧ್ಯಕ್ಷ ರಫೀಕ್ ಬಿಎಸ್ಎಫ್, ಕುಂದಾಪುರ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಅಧ್ಯಕ್ಷ ರೋಷನ್ ಶೆಟ್ಟಿ, ಆರ್ಪಿಜಿಎಸ್ ಜಿಲ್ಲಾಧ್ಯಕ್ಷ ರೋಷನಿ ಒಲಿವೆರಾ, ಜೆಡಿಎಸ್ ಮುಖಂಡ ಮನ್ಸೂರ್ ಇಬ್ರಾಹಿಂ, ಪುರಸಭೆ ಸದಸ್ಯ ಅಸ್ಫಾಕ್ ಕೋಡಿ, ಅಬ್ಬು ಮಹಮ್ಮದ್, ರತ್ನಾಕರ ಖಾರ್ವಿ, ಕುಂದಾಪುರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೇವಕಿ ಸಣ್ಣಯ್ಯ, ಎಚ್.ಶಬಾನ್ ಹಂಗಳೂರು ಮೊದಲಾದವರು ಉಪಸ್ಥಿತರಿದ್ದರು.