varthabharthi


ಕರಾವಳಿ

ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಅನುಷ್ಠಾನದಲ್ಲಿ ಎಸ್‍ಸಿಡಿಸಿಸಿ ಬ್ಯಾಂಕ್ ರಾಜ್ಯಕ್ಕೆ ಪ್ರಥಮ

ವಾರ್ತಾ ಭಾರತಿ : 20 Jul, 2021

ಮಂಗಳೂರು: ರೈತರ ಪಾಲಿಗೆ ವರದಾನವಾಗಿರುವ ಕೇಂದ್ರ ಸರಕಾರದ ಬಹು ಮಹಾತ್ವಾಕಾಂಕ್ಷೆಯ ಯೋಜನೆಯಾದ “ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ”ಯನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‍ಸಿಡಿಸಿಸಿ ಬ್ಯಾಂಕ್) ಸಮರ್ಪಕವಾಗಿ ಜ್ಯಾರಿಗೆ ತಂದು ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿರುವುದು ಹೆಮ್ಮೆಯ ವಿಚಾರ ಎಂದು ಎಸ್‍ಸಿಡಿಸಿಸಿ ಬ್ಯಾಂಕ್‍ನ ಅಧ್ಯಕ್ಷರಾದ ಡಾ.ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ. 

ಅವರು ಸೋಮವಾರ ಬ್ಯಾಂಕಿನಲ್ಲಿ ಕೆನರಾ ಬ್ಯಾಂಕ್ ಹಾಗೂ ಲೀಡ್ ಡಿಸ್ಟ್ರಿಕ್ಟ್ ಬ್ಯಾಂಕ್ ವತಿಯಿಂದ ನಡೆದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದರು. 

ಹವಾಮಾನ ವೈಪರೀತ್ಯದಿಂದಾಗುವ ಬೆಳೆಗಳ ಹಾನಿಯನ್ನು ಭರಿಸಲು ಸರಕಾರ ಕೈಗೊಂಡ ಈ ಯೋಜನೆಯಲ್ಲಿ ಎಸ್‍ಸಿಡಿಸಿಸಿ ಬ್ಯಾಂಕ್ ಮುಂಚೂಣಿಯಲ್ಲಿದ್ದು, ರಾಜ್ಯದ ಇತರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳಿಗಿಂತ ಮುನ್ನಡೆಯನ್ನು ಕಂಡು ಎಸ್‍ಸಿಡಿಸಿಸಿ ಬ್ಯಾಂಕ್ ದಾಖಲೆ ನಿರ್ಮಿಸಿದೆ. 2021-22ನೇ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು 3,45,421 ರೈತರು ಈ ಯೋಜನೆಯಡಿ ದಾಖಲಾತಿಗೊಂಡಿದ್ದು, ಈ ಪೈಕಿ ಎಸ್‍ಸಿಡಿಸಿಸಿ ಬ್ಯಾಂಕ್ ಮೂಲಕ 94,045 ರೈತರು ಈ ಯೋಜನೆಯಲ್ಲಿ ದಾಖಲಾತಿ ಪಡೆದು, ರೂ.11.79 ಕೋಟಿ ವಿಮಾ ಪ್ರೀಮಿಯಂ ಜಮೆಯಾಗಿದೆ ಎಂದು ಡಾ.ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದರು.

ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಅಭಿನಂದಿಸಿ ಮಾತನಾಡಿದ ಕೆನರಾ ಬ್ಯಾಂಕ್ ಮಹಾಪ್ರಬಂಧಕರಾದ ಶ್ರೀ ಯೋಗೀಶ್ ಆಚಾರ್, ಸಹಕಾರ ತತ್ವದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್‍ಸಿಡಿಸಿಸಿ ಬ್ಯಾಂಕ್ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಅದರಲ್ಲೂ ರೈತಪರ ನಿಲುವಿನಲ್ಲಿ ಹಾಗೂ ಚಿಂತನೆಯಲ್ಲಿ ಎಸ್‍ಸಿಡಿಸಿಸಿ ಬ್ಯಾಂಕ್ ಕಾರ್ಯವೆಸಗುತ್ತಿರುವುದು ಅಭಿನಂದನಾರ್ಹ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜೀಯವರ ಪರಿಕಲ್ಪನೆಯ ಈ ಯೋಜನೆಯನ್ನು ಅನುಷ್ಠಾನಕ್ಕೆ ತರುವಲ್ಲಿ ಎಸ್‍ಸಿಡಿಸಿಸಿ ಬ್ಯಾಂಕ್ ಅತ್ಯಂತ ಯಶಸ್ವಿಯಾಗಿದೆ. ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರ ದೂರದರ್ಶಿ ನಾಯಕತ್ವ ಇದಕ್ಕೆ ಪ್ರೇರಣೆಯಾಗಿದ್ದು, ಇವರ ಮಾರ್ಗದರ್ಶನದಲ್ಲಿ ಸಹಕಾರ ಕ್ಷೇತ್ರವು ಇನ್ನಷ್ಟು ಉಜ್ವಲತೆಯನ್ನು ಪಡೆಯಲಿ ಎಂದು ಶುಭ ಹಾರೈಸಿದರು. 

ಈ ಸಂದರ್ಭದಲ್ಲಿ ಲೀಡ್ ಡಿಸ್ಟ್ರಿಕ್ಟ್ ಮೆನೇಜರ್ ಪ್ರವೀಣ್, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರಾದ ಹೆಚ್.ಎನ್. ನಾಯಕ್, ನಬಾರ್ಡ್ ಡಿಡಿಎಂ ಶ್ರೀಮತಿ ಸಂಗೀತಾ ಕರ್ತ, ಸಹಕಾರಿ ಸಂಘಗಳ ಉಪನಿಬಂಧಕರಾದ ಪ್ರವೀಣ್ ಬಿ. ನಾಯಕ್, ಬ್ಯಾಂಕಿನ ಉಪಾಧ್ಯಕ್ಷರಾದ ವಿನಯಕುಮಾರ್ ಸೂರಿಂಜೆ, ನಿರ್ದೇಶಕರುಗಳಾದ ಶಶಿಕುಮಾರ್ ರೈ ಬಾಲ್ಯೊಟ್ಟು, ರಾಜು ಪೂಜಾರಿ, ಎಸ್.ಬಿ. ಜಯರಾಮ್ ರೈ, ಮಹೇಶ್ ಹೆಗ್ಡೆ, ಐಕಳ ಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಟಿ.ಜಿ. ರಾಜಾರಾಮ್ ಭಟ್, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ರವೀಂದ್ರ, ಮಹಾ ಪ್ರಬಂಧಕರಾದ ಗೋಪಿನಾಥ್ ಭಟ್, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶ್ರೀ ಸುಧೀರ್ ಕುಮಾರ್ ಹಾಗೂ ಬ್ಯಾಂಕಿನ ಅಧಿಕಾರಿಗಳು ಉಪಸ್ಥಿತರಿದ್ದರು.

ಲೀಡ್ ಡಿಸ್ಟ್ರಿಕ್ಟ್ ಮೆನೇಜರ್ ಶ್ರೀ ಪ್ರವೀಣ್ ಸ್ವಾಗತಿಸಿದರು. ಸಹಕಾರಿ ಸಂಘಗಳ ಉಪನಿಬಂಧಕರಾದ ಪ್ರವೀಣ್ ಬಿ. ನಾಯಕ್ ವಂದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)