ದೂದ್ಸಾಗರ್ ಬಳಿ ಗುಡ್ಡ ಕುಸಿತ: ಹಳಿ ತಪ್ಪಿದ ಮಂಗಳೂರು ಮುಂಬೈ ರೈಲು
ಪಣಜಿ, ಜು.23: ಮುಂಬೈಗೆ ತೆರಳುತ್ತಿದ್ದ ವಿಶೇಷ ಮಂಗಳೂರು-ಮುಂಬೈ ಎಕ್ಸ್ಪ್ರೆಸ್ ರೈಲು ಶುಕ್ರವಾರ ದೂದ್ಸಾಗರ್-ಸೋನೌಲಿಮ್ನ ರೈಲು ನಿಲ್ದಾಣದ ಸಮೀಪ ಹಳಿ ತಪ್ಪಿದೆ. ಭಾರೀ ಮಳೆ ಸುರಿಯುತ್ತಿ ರುವ ಪರಿಣಾಮ ಇಲ್ಲಿ ಭೂಕುಸಿತ ಸಂಭವಿಸಿದ್ದರಿಂದ ರೈಲು ಹಳಿತಪ್ಪಿದೆಯೆಂದು ವರದಿಯಾಗಿದೆ.
ಇಂಜಿನ್ ಹಾಗೂ ಇಂಜಿನ್ ನಂತರದ ಜನರಲ್ ಬೋಗಿಯು ಭೂಕುಸಿತದಿಂದ ಹಳಿ ತಪ್ಪಿದೆ. ಆದರೆ, ಯಾವುದೇ ಪ್ರಯಾಣಿಕರಿಗೆ ಗಾಯಗಳಾದ ಬಗ್ಗೆ ವರದಿಯಾಗಿಲ್ಲ ಎಂದು ನೈಋತ್ಯ ರೈಲ್ವೆಯ ಪತ್ರಿಕಾ ಹೇಳಿಕೆ ತಿಳಿಸಿದೆ.
ಹಳಿತಪ್ಪಿದ ಬೋಗಿಯಲ್ಲಿದ್ದ ಪ್ರಯಾಣಿಕರನ್ನು ಇನ್ನೊಂದು ಬೋಗಿಗೆ ವರ್ಗಾಯಿಸಲಾಗಿದೆ ಎಂದು ಅದು ಹೇಳಿದೆ. ರೈಲು ಹಳಿ ತಪ್ಪಿರುವುದರಿಂದ ಮಂಗಳೂರು ಜಂಕ್ಷನ್-ಛತ್ರಪತಿ ಶಿವಾಜಿ ಟರ್ಮಿನಸ್ ಎಕ್ಸ್ಪ್ರೆಸ್ ವಿಶೇಷ ರೈಲು ಸಂಚಾರಕ್ಕೆ ತೊಂದರೆ ಉಂಟಾಗಿದೆ. ಕ್ಯಾಸ್ಟಲ್ ರಾಕ್ನಿಂದ ಹಾಗೂ ವಾಸ್ಕೋಡಗಾಮಾದಿಂದ ಅಪಘಾತ ಪರಿಹಾರ ರೈಲು (ಎಆರ್ಟಿ) ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದ್ದು, ಮರುಸ್ಥಾಪನಾ ಕ್ರಮಗಳನ್ನು ಕೈಗೊಂಡಿದೆ.
Next Story