ಕನ್ನಡ ದ್ರೋಹಿ ಅಣ್ಣಾಮಲೈ
ಮಾನ್ಯರೇ,
ದಶಕದ ಕಾಲ ಅಧಿಕಾರ ಅನುಭವಿಸಿದ್ದು ಕರ್ನಾಟಕದಲ್ಲಿ. ಮಾಡಿದ ಕೆಲಸದ ನೂರು ಪಟ್ಟು ಹೆಚ್ಚು ಪ್ರಚಾರ ಪಡೆದಿದ್ದು ಕರ್ನಾಟಕದಲ್ಲಿ. ತಲೆ ಮೇಲೆ ಹೊತ್ತು ಸಿಂಗಮ್, ಅದೂ ಇದು ಎಂದು ಪಟ್ಟ ಕಟ್ಟಿದ್ದು ಕನ್ನಡಿಗರು. ಬಂದಲ್ಲಿ ಹೋದಲ್ಲಿ ಹಾರ ತುರಾಯಿ ಹಾಕಿ, ಸೆಲ್ಫಿ ತೆಗೆದುಕೊಂಡು, ಪೋಸ್ಟರ್ ಮಾಡಿ, ವೀಡಿಯೊ ಮಾಡಿ ವಾಟ್ಸ್ಆ್ಯಪ್, ಫೇಸ್ಬುಕ್ಗಳಲ್ಲಿ ಹಾಕಿ ಮೆರೆಸಿದ್ದು ಕನ್ನಡಿಗರು. ನ್ಯಾಯ, ನೀತಿ, ಜನಸೇವೆ, ದಕ್ಷತೆ, ಪ್ರಾಮಾಣಿಕತೆ ಎಂದು ಇವರು ಭಾಷಣ ಕೊರೆದಿದ್ದು ಕನ್ನಡಿಗರಿಗೆ. ಇಷ್ಟೆಲ್ಲ ಮಾಡಿ ಕರ್ನಾಟಕ ಸರಕಾರದ ದುಡ್ಡಲ್ಲಿ, ಕನ್ನಡಿಗರ ಸರಕಾರದ ಒಂದೊಂದು ಸೌಲಭ್ಯ ಪಡೆದುಕೊಂಡು ಇಲ್ಲಿನ ಜನರಿಗೆ ನಿವೃತ್ತಿವರೆಗೆ ನಿಯತ್ತಿನಿಂದ ಸೇವೆ ಸಲ್ಲಿಸುವುದು ಬಿಟ್ಟು 9 ವರ್ಷ ಐಪಿಎಸ್ ಅಧಿಕಾರಿಯಾಗಿ ಸಿಕ್ಕಿದ ಎಲ್ಲ ಅವಕಾಶಗಳನ್ನು ದುರುಪಯೋಗ ಮಾಡಿಕೊಂಡು ಕೇವಲ ರಾಜಕೀಯಕ್ಕೆ ಸೇರಲು ಬೇಕಾದ ವೇದಿಕೆ, ವರ್ಚಸ್ಸು ಸಿದ್ಧಪಡಿಸುತ್ತಿದ್ದರು. ಈ ವ್ಯಕ್ತಿಯೇ ಕುಪ್ಪುಸಾಮಿ ಅಣ್ಣಾಮಲೈ. ಇದೇ ವ್ಯಕ್ತಿ ಕರ್ನಾಟಕದಲ್ಲಿ ‘ಸಿಂಗಮ್’ ಅಂತ ಕನ್ನಡಿಗರ ತಲೆ ಮೇಲೆ ಕೂತು ಈಗ ತಮಿಳುನಾಡಿಗೆ ಹಾರಿ ಹೋದ ವ್ಯಕ್ತಿ. ಅಷ್ಟೇ ಆಗಿದ್ದರೆ ಪರವಾಗಿಲ್ಲ ಬಿಡಿ ಎಂದು ಬಿಟ್ಟು ಬಿಡಬಹುದಿತ್ತು. ಆದರೆ ಈತ ಈಗ ತಿಂದ ಬಟ್ಟಲಿಗೆ ಎರಡು ಬಗೆಯುವ ಕೆಲಸಕ್ಕೆ ಇಳಿದಿದ್ದಾರೆ. 9 ವರ್ಷ ತಾನು ಕುಡಿದ ನೀರಿಗೆ ದ್ರೋಹ ಮಾಡುತ್ತಿದ್ದಾರೆ. ತನ್ನನ್ನು ವೀರ ಧೀರ ಎಂದು ಕೊಂಡಾಡಿದ ಜನರಿಗೆ ಕುಡಿಯುವ ನೀರು ಸಿಗುವುದಕ್ಕೆ ಅಡ್ಡಿಯಾಗುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ(ಇವರ ವಿರೋಧದಿಂದ ಏನೂ ಆಗದು. ಅದು ಬೇರೆವಿಷಯ). ಈತನನ್ನು ಏನೆನ್ನಬೇಡ?
ಕನ್ನಡಿಗರಿಗೆ ಕುಡಿಯುವ ನೀರು, ವಿದ್ಯುತ್ ಸಿಗುವ ಮೇಕೆದಾಟು ಯೋಜನೆ ಜಾರಿಯಾಗಬಾರದು ಎಂದು ಈತ ಉಪವಾಸ ಕೂರುತ್ತಾರಂತೆ. ಇಂತಹ ಕನ್ನಡ ದ್ರೋಹಿ ಇವರು. ಇಂತಹವರಿಗೆ ನಾವು ಪ್ರಚಾರ, ಅಧಿಕಾರವನ್ನು ಹರಿವಾಣದಲ್ಲಿಟ್ಟು ಕೊಟ್ಟೆವಲ್ಲ ಎಂದು ಕನ್ನಡಿಗರು ಈಗ ಕೊರಗುವಂತಾಗಿದೆ. ಇಲ್ಲಿರುವಾಗ ‘‘ಐ ಆ್ಯಮ್ ಎ ಪ್ರೌಡ್ ಕನ್ನಡಿಗ’’ ಎಂದು ಈಗ ಕನ್ನಡಿಗರ ಕಿವಿಗೆ ಹೂವಿಟ್ಟುಬಿಟ್ಟ ದ್ರೋಹಿ!
ಇಂತಹ ಕನ್ನಡ ದ್ರೋಹಿಯ ಬಗ್ಗೆ ಬಿಜೆಪಿ ಕರ್ನಾಟಕ ನಾಯಕರು ಏನು ಹೇಳುತ್ತಾರೆ? ಅವರ ಗೆಲುವಿಗಾಗಿ ಹೋಗಿ ಹಗಲು ರಾತ್ರಿ ದುಡಿದ ಬಿಜೆಪಿ ನಾಯಕರು, ಕರ್ನಾಟಕದ ಬಿಜೆಪಿ ಕಾರ್ಯಕರ್ತರು ಈಗ ಇವರ ಮಹಾದ್ರೋಹದ ಬಗ್ಗೆ ಕನ್ನಡಿಗರಿಗೆ ಉತ್ತರ ನೀಡಬೇಕಾಗಿದೆ.
-ಶರತ್ ಕುಮಾರ್, ರಾಮನಗರ